
ವೈಜ್ಞಾನಿಕ ಹೆಸರು – ಟಿನೋಸ್ಪೋರ ಕಾರ್ಡಿಫೋಲಿಯ (Tinospora cordifolia)
ಆಂಗ್ಲ ಹೆಸರು – ಗಿಲೋಯ್ (Giloy)
ಭೂಮಿಯ ಮೇಲೆ ಬೆಳೆಯುವ ಅಮೃತದಂತೆ ನಮ್ಮ ಪಾಲಿಗೆ ಸಹಕಾರಿಯಾಗಿರುವ ಸದಾ ಜೀವಿತವಾಗಿರುವ ಅಮೃತಬಳ್ಳಿಯ ಬಗೆಗೆ ತಿಳಿಯಲೇ ಬೇಕು.ಯಾವುದೇ ಅಧಿಕ ಆರೈಕೆಗಳಿಲ್ಲದೆ ಎಲ್ಲೆಂದರಲ್ಲಿ ಮರಕ್ಕೆ ಆಸರೆಯಾಗಿಸಿಕೊಂಡು ಹಸಿರಾಗಿ ಬೆಳೆಯುವ ಬಳ್ಳಿ ಎಂದರೆ ಅಮೃತಬಳ್ಳಿ. ಅಮೃತಬಳ್ಳಿಯಲ್ಲಿ ಅನೇಕ ಔಷಧಿಕ ಗುಣಗಳಿದ್ದು ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿದೆ. ಅಮೃತಬಳ್ಳಿ ಸ್ವಲ್ಪ ಸಿಹಿ ಹಾಗು ವಗರು ಸ್ವಾದದಿಂದ ಕೂಡಿರುತ್ತದೆ. ಬೇವಿನ ಮರದ ಎಲ್ಲ ಭಾಗಗಳು ತುಂಬಾ ಆರೋಗ್ಯಯುತವಾಗಿದ್ದು, ಜ್ವರಕ್ಕೆ ತುಂಬಾ ಉಪಯುಕ್ತವಾಗಿದೆ. ಶರೀರವನ್ನು ಸಬಲಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ದಿ ಪಡಿಸುತ್ತದೆ. ತುಸು ತೆಳ್ಳನೆಯ ಕಾಂಡವೇ ಅಮೃತದ ಕಣಜವಾಗಿದ್ದು,ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ.
ಅಮೃತ ಬಳ್ಳಿಯ ಉಪಯೋಗಗಳು
ಜ್ವರಕ್ಕೆ ಸೂಕ್ತ ಮದ್ದು ಅಮೃತಬಳ್ಳಿ
- ಅಮೃತಬಳ್ಳಿಯ ಕಾಂಡವನ್ನು ಚೆನ್ನಾಗಿ ತೊಳೆದು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಕಿವುಚಿ ಶೋಧಿಸಿಕೊಂಡು ಕುಡಿಯುವುದರಿಂದ ಜ್ವರವು ಕಡಿಮೆಯಾಗುತ್ತದೆ .
- ಅಮೃತಬಳ್ಳಿ ಹಾಗೂ ಒಂದು ಇಂಚು ಶುಂಠಿ ಇವೆರಡನ್ನೂ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕೆಲವು ದಿನಗಳ ಕಾಲ ಸೇವಿಸಿದರೆ ಜ್ವರವು ಕಡಿಮೆಯಾಗುತ್ತದೆ.
- ಅಮೃತಬಳ್ಳಿ ಎಲೆ ಹಾಗೂ ಕಾಂಡವನ್ನು ಚೆನ್ನಾಗಿ ತೊಳೆದು ತೆಗೆದುಕೊಳ್ಳಬೇಕು, ಎರಡು ಲೋಟ ನೀರಿಗೆ ಅಮೃತಬಳ್ಳಿ ಎಲೆ ಮತ್ತು ಕಾಂಡ, ಅರ್ಧ ಅರಿಶಿಣ ಕೊಂಬಿನ ತುಂಡು (ಪುಡಿ ಮಾಡಿಕೊಂಡು), ಅರ್ಧ ಈರುಳ್ಳಿ, ಎಂಟು ಕಾಳುಮೆಣಸು, ಎರಡು ಚಕ್ಕೆ ಹಾಗೂ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಅರ್ಧದಷ್ಟು ಇಂಗುವಂತೆ ಕುದಿಸಬೇಕು, ಶೋಧಿಸಿ ಕುಡಿಯಬೇಕು. ಇದು ಯಾವುದೇ ರೀತಿಯ ಜ್ವರಕ್ಕೆ ಉಪಯುಕ್ತವಾಗಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಮೃತಬಳ್ಳಿ
- ಅಮೃತಬಳ್ಳಿಯ ಎಲೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. 2 ಕಪ್ ನೀರನ್ನು ಒಂದು ಪ್ಯಾನ್ನಲ್ಲಿ ಕುದಿಸಿ. ನೀರಿನಲ್ಲಿ ಕತ್ತರಿಸಿದ ಎಲೆಗಳು, ಶುಂಠಿ, ಜೀರಿಗೆ ಮತ್ತು ನೀರುಳ್ಳಿಯನ್ನು ಸೇರಿಸಿ. ಸಣ್ಣ ಉರಿಯಲ್ಲಿ 10-15 ನಿಮಿಷ ಕಾಲ ಕುದಿಸಿ, ತಂಪಾಗಲು ಬಿಡಿ. ನಂತರ ಜೇನು ಸೇರಿಸಿ (ಬೇಕಾದರೆ ಮಾತ್ರ) ಮತ್ತು ಕುಡಿಯಿರಿ. ನಿತ್ಯವೂ ಹಿತ-ಮಿತದಲ್ಲಿ ಅಮೃತಬಳ್ಳಿ ಸೇವಿಸುವುದರಿಂದ ದೇಹದ ಇಮ್ಯೂನ್ ಶಕ್ತಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ!
ವಾಂತಿ ಹಾಗೂ ಆಮ್ಲ ಪಿತ್ತಕ್ಕೆ,ಗ್ಯಾಸ್ಟ್ರಿಕ್ ಸಮಸ್ಯೆಗಳು
- ಅತಿಯಾಗಿ ವಾಂತಿಯಾಗುತ್ತಿದ್ದಾರೆ ಅಮೃತಬಳ್ಳಿ ನೀರಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಶೋಧಿಸಿ ಅದರೊಂದಿಗೆ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಬಹಳ ಬೇಗ ಕಡಿಮೆಯಾಗುತ್ತದೆ.
- ವಿಪರೀತವಾದ ಗ್ಯಾಸ್ಟ್ರಿಕ್ ಸಮಸ್ಯೆಗಳಿದ್ದರೆ ಅಮೃತಬಳ್ಳಿ ಹಾಗೂ ತ್ರಿಫಲ ಚೂರ್ಣ ಹಾಕಿ ಕಷಾಯ ಮಾಡಿ ಕುಡಿಯಬೇಕು. ಇದರಿಂದ ಆಮ್ಲ ಪಿತ್ತ ಕೂಡ ಕಡಿಮೆ ಆಗುತ್ತದೆ.
- ಅಮೃತಬಳ್ಳಿ ತೊಳೆದು ಜಜ್ಜಿಕೊಂಡು ಚೆನ್ನಾಗಿ ಒಣಗಿಸಬೇಕು. ನಂತರ ಅದನ್ನು ಪುಡಿಮಾಡಿಕೊಂಡು ಒಂದು ಚಿಟಿಕೆ ಕರಿಮೆಣಸಿನ ಪುಡಿ ಹಾಕಿ ಒಂದು ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆ ಒಮ್ಮೆ ಸೇವಿಸಬೇಕು. ಇದರಿಂದ ವಾಯುವಿನಿಂದ ಉಂಟಾಗುವ ಎದೆ ನೋವು ಕಡಿಮೆ ಆಗುತ್ತದೆ.
ತಲೆಗೆ ಹಾಗೂ ಕಣ್ಣಿಗೆ ತಂಪು.
- ಅಮೃತಬಳ್ಳಿಯನ್ನು ನೀರಿನೊಂದಿಗೆ ಕುದಿಸಿ ಅದಕ್ಕೆ ಎಳ್ಳೆಣ್ಣೆ ಹಾಕಿ ನೀರಿನ ಅಂಶ ಹೋಗುವವರೆಗೂ ಇಂಗಿಸಿ ಸ್ವಲ್ಪ ಪಚ್ಚ ಕರ್ಪೂರವನ್ನು ಹಾಕಿ ಚೆನ್ನಾಗಿ ಕಲಕಿ ಶೋಧಿಸಿಕೊಂಡು ಶೇಖರಿಸಿಡಿ,ಇದನ್ನು ತಲೆಗೆ ಹಾಕಿ ಹಗುರ ಮಸಾಜು ಮಾಡಿಕೊಂಡರೆ ತಲೆ ಉಷ್ಣ, ಕಣ್ಣು ಉರಿ ಕಡಿಮೆಯಾಗುತ್ತದೆ.ಕೂದಲು ಬೆಳವಣಿಗೆಗೂ ಉತ್ತಮ.
ಕಿವಿ ನೋವು ಬಂದಾಗ ಅಮೃತಬಳ್ಳಿ ನೆನೆಸಿಕೊಳ್ಳಿ
- ಸುಲಭವಾಗಿ ಅಮೃತಬಳ್ಳಿ ಎಲೆ ಹಾಗು. ಬಳ್ಳಿ ಸಮೇತ ಅರೆದು ರಸ ತೆಗೆಯಬೇಕು. ರಸವನ್ನು ಎರಡು ಹನಿ ಕಿವಿಗೆ ಹಾಕುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ.
ಹೃದಯ ಬಡಿತದಲ್ಲಿ ಏರಿಳಿತ ಕಂಡಾಗ
- ಅಮೃತ ಬಳ್ಳಿ ಹಾಗು ಒಂದೆಲಗವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಕುದಿಸಿ, ಅದು ಅರ್ಧದಷ್ಟು ಆಗುವ ತನಕ ಕುದಿಸಬೇಕು. ಈ ಕಷಾಯ ನಿತ್ಯ ಸೇವಿಸುತ್ತಾ ಬಂದರೆ ಹೃದಯದ ಬಡಿತ ನಿಯಂತ್ರಣಕ್ಕೆ ಬರುತ್ತದೆ.
ಕಣ್ಣಿನ ಆರೋಗ್ಯಕ್ಕೆ
- ಒಂದು ಲೋಟ ನೀರಿಗೆ ಅಮೃತ ಬಳ್ಳಿಯ ಜೊತೆ ತ್ರಿಫಲ ಚೂರ್ಣವನ್ನು ಸೇರಿಸಿ ಕುದಿಸಿ, ನೀರು ಅರ್ಧದಷ್ಟು ಆದಮೇಲೆ ಶೋಧಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಇದು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
ಉನ್ಮಾದದ ಹುಚ್ಚಿಗೆ ಅಮೃತಬಳ್ಳಿಯ ಪರಿಹಾರ
- ಉನ್ಮಾದದ ಹುಚ್ಚಿಗೆ ಒಂದೊಳ್ಳೆ ಕಷಾಯ ಎಂದರೆ ಅಮೃತ ಬಳ್ಳಿ ಹಾಗೂ ಒಂದೆಲಗವನ್ನು ರಾತ್ರಿಯೆ ನೆನೆಸಿ ಇಡಬೇಕು. ಬೆಳಿಗ್ಗೆ ನೆನೆಸಿದ ನೀರಿನಲ್ಲಿ ಕಿವುಚಿ, ಶೀತ ಕಷಾಯವನ್ನು ಸಿದ್ದಪಡಿಸಬೇಕು. ನಾಲ್ಕು ಚಮಚ ಕಷಾಯಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು. ಪಿತ್ತ ದೋಷವು ಮಿತಿ ಮೀರಿದಾಗ ಜಾಸ್ತಿ ಕೂಗುವುದು, ಕಿರುಚುವುದು, ಕೋಪ ಎಲ್ಲವೂ ಹದ್ದು ಮೀರುತ್ತದೆ.
ಯಕೃತ್ತಿನ ಆರೋಗ್ಯಕ್ಕೆ
- ಯಕೃತ್ತಿನ ಯಾವುದೇ ಸಮಸ್ಯೆಗಳಿಗೆ ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಒಂದು ಸೂಕ್ತ ಪರಿಹಾರವನ್ನು ಈಗ ಚರ್ಚಿಸೋಣ. ಅಮೃತಾಬಳ್ಳಿ ತುಂಡು, 3 ಹಿಪ್ಪಲಿ ಹಾಗೂ 10 ಬೇವಿನ ಚಿಗುರು ಎಲೆ ಮೂರನ್ನು ಚೆನ್ನಾಗಿ ಅರೆದು ರಾತ್ರಿ ನೀರಿನಲ್ಲಿ ನೆನೆಸಬೇಕು. ಬೆಳೆಗ್ಗೆ ಎದ್ದು ಕಿವುಚಿ, ಸೋಸಿಕೊಂಡು ಜೇನುತುಪ್ಪ ಬೆರೆಸಿ ಸೇವಿಸಬೇಕು. ಇದು ಯಕೃತ್ತಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
ಇಷ್ಟು ಸಮಸ್ಯೆಗಳಿಗೆ ಒಂದೇ ಪರಿಹಾರವಂತೆ ಇರುವ ಅಮೃತಬಳ್ಳಿ ನಮ್ಮ ಮನೆ ಅಂಗಳದಲ್ಲಿ ಬೆಳೆದುಕೊಂಡು ಹಬ್ಬಿಕೊಳ್ಳುತ್ತದೆ. ಇದಕ್ಕೆ ಯಾವುದೇ ರೀತಿಯ ಆರೈಕೆ ಇಲ್ಲದೆ ಸಹಜವಾಗಿ ಬೆಳೆಯುತ್ತದೆ. ಇಂತಹ ಅಮೃತಬಳ್ಳಿ ಪ್ರಯೋಜನವನ್ನು ನಾವು ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಪ್ರಯೋಜನವನ್ನು ಪಡೆದುಕೊಳ್ಳೋಣ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: ನೆಗಡಿ ಕೆಮ್ಮು ಮತ್ತು ಕಫ? ಈ ಮನೆಮದ್ದುಗಳು ಶೀಘ್ರ ಪರಿಹಾರ ನೀಡುತ್ತವೆ! - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ
Pingback: ಚಹಾ ಪ್ರಿಯರಿಗೆ ವಿಭಿನ್ನ ಬಗೆಯ ವಿಶೇಷ ಎಲೆಗಳ ಚಹಾ (Tea) - ದಾಳಿಂಬೆ, ಅರಳಿಮರ, ಉತ್ತರಾಣೆ, ಶಂಖಪುಷ್ಪ, ಲಕ್ಷ್ಮಣ ಫಲ ಟೀ