
ಇಂದಿನ ದಿನಮಾನದಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಅನುಭವಿಸುವ ಸಮಸ್ಯೆಗಳಲ್ಲಿ ಒಂದು ಪ್ರಮುಖವಾದದ್ದು ಎಂದರೆ ಮುಟ್ಟಿನ ದಿನದ ಸಮಸ್ಯೆಗಳು. ಕೆಲವರಿಗೆ ಮುಟ್ಟು ತಡವಾದರೆ, ಕೆಲವರಿಗೆ ತಿಂಗಳಲ್ಲಿ ಎರಡು ಬಾರಿ ಮುಟ್ಟಾಗುವುದು, ಹೀಗೆ ಇನ್ನೂ ಹಲವಾರು ಸಮಸ್ಯೆಗಳು. ಇಂತಹ ಅನೇಕ ಸಮಸ್ಯೆಗಳ ಬಗೆಗೆ ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ವಿಶ್ಲೇಸಿಸಲಾಗಿದೆ.
ಮುಟ್ಟಿನ ಸಮಯದಲ್ಲಿ ಕಾಣಿಸುವ ನೋವಿಗೆ ಇಲ್ಲಿದೆ ತ್ವರಿತ ಪರಿಹಾರಗಳು
- ಕರಿಎಳ್ಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಅರ್ಧ ಚಮಚ ಕರಿ ಎಳ್ಳಿನ ಪುಡಿಯನ್ನು ನೀರಿನಲ್ಲಿ ಬೆರೆಸಿ, ದಿನಕ್ಕೆ ಎರಡು ಬಾರಿ ಕುಡಿಯಬೇಕು. ಇದನ್ನು ಕೆಲ ದಿನಗಳವರೆಗೆ ಸತತವಾಗಿ ಸೇವಿಸಬೇಕು. ಇದು ಮುಟ್ಟಿನ ಸಮಯದ ಹೊಟ್ಟೆ ನೋವಿಗೆ ಉತ್ತಮ ಮದ್ದಾಗಿದೆ.
- ಮೂರು ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ನೀರಿನಲ್ಲಿ ಬೇಯಿಸಬೇಕು. ನೀರು ಕುದ್ದು ಅರ್ಧದಷ್ಟಾದ ಮೇಲೆ ಶೋಧಿಸಿಕೊಂಡು ದಿನಕ್ಕೆ ಮೂರು ಬಾರಿ ಕುಡಿಯಬೇಕು.
- ಬಾಳೆ ಹೂವಿನ ಉಪಯೋಗ ಮುಟ್ಟಿನ ಸಮಯದಲ್ಲಿ ಬಲು ಉತ್ತಮವಾಗಿದೆ. ಹೊಟ್ಟೆ ನೋವು ಬರುವಾಗ ಆಹಾರದಲ್ಲಿ ಬಾಳೆ ಹೂವಿನ ಬಳಕೆ ಉತ್ತಮವಾಗಿದೆ.
- ಮುಟ್ಟಿನ ದಿನ ಆರಂಭವಾದಾಗ, ಸೋಂಪು ಕಾಳನ್ನು ನೀರಿನಲ್ಲಿ ಕುದಿಸಿ, ಕಷಾಯ ತಯಾರಿಸಬೇಕು. ನಂತರ ಈ ಕಷಾಯಕ್ಕೆ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ತ್ವರಿತವಾಗಿ ಕಡಿಮೆಯಾಗುತ್ತದೆ. ಇದನ್ನು ಮುಟ್ಟಿನ ದಿನಗಳಲ್ಲಿ ಮಾತ್ರ ಸೇವಿಸುವುದು ಸೂಕ್ತವಾಗಿದೆ.
- ಒಂದು ಬಾಳೆಹಣ್ಣು, ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ನೆಲ್ಲಿಕಾಯಿ ರಸ ಮೂರನ್ನು ಮಿಶ್ರಣ ಮಾಡಿ ದಿನಕ್ಕೆ ಒಮ್ಮೆ ಸೇವಿಸಬೇಕು. ಇದು ಮುಟ್ಟಿನ ಸಮಯದ ಹೊಟ್ಟೆ ನೋವಿಗೆ ಮಾತ್ರವಲ್ಲದೆ ಸರ್ವ ಸ್ತ್ರೀ ಸಮಸ್ಯೆಗೂ ಉತ್ತಮವಾಗಿದೆ. ಬಿಳಿಮುಟ್ಟು ಸಮಸ್ಯೆಗೂ ಇದು ಉತ್ತಮ ಮದ್ದಾಗಿದೆ.
- ಗಜ್ಜಿಗದ ತಿರುಳನ್ನು ಚೆನ್ನಾಗಿ ಹುರಿಯಬೇಕು, ಅನಂತರ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಇದರ ಅರ್ಧ ಚಮಚ ಪುಡಿಗೆ, ಕಾಲು ಚಮಚ ಚಕ್ಕೆ ಪುಡಿಯನ್ನು ಹಾಗೂ ಜೇನುತುಪ್ಪ ಬೆರೆಸಿ ಸೇವಿಸಬೇಕು. ಇದನ್ನು ಮುಟ್ಟಿನ ದಿನ ಆರಂಭವಾದಾಗ ಮೂರು ದಿನಗಳ ಕಾಲ ಸೇವಿಸಬೇಕು. ಇದರಿಂದ ಎಲ್ಲ ಸಮಸ್ಯೆಗಳು ಬೇಗನೆ ಗುಣವಾಗುತ್ತದೆ.
ಋತುಚಕ್ರವು ಕ್ರಮ ಬದ್ಧವಾಗಿರಲು ಕೆಲವು ಮನೆಮದ್ದುಗಳು
- ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪದಲ್ಲಿ ಹಿಂಗನ್ನು ಹುರಿಯಬೇಕು. ಹುರಿದ ಹಿಂಗನ್ನು ಪುಡಿ ಮಾಡಿಕೊಳ್ಳಬೇಕು. ದಿನಕ್ಕೆ ಎರಡು ಬಾರಿ ಸಕ್ಕರೆ ಅಥವಾ ಬೆಲ್ಲದೊಂದಿಗೆ ಸೇವಿಸಿದರೆ ಮಾಸಿಕ ದಿನಗಳು ಸರಿಯಾದ ಸಮಯಕ್ಕೆ ಆಗುತ್ತದೆ.
- ನೆಲ್ಲಿಕಾಯಿಯನ್ನು ತಿನ್ನುವುದು ಋತುಚಕ್ರ ಸಂಬಂಧಿ ಸಮಸ್ಯೆಗಳಿಗೆ ಅತಿ ಉತ್ತಮವಾಗಿದೆ. ಮುಟ್ಟಿನ ದಿನಗಳು ಸರಿಯಾದ ಸಮಯದಲ್ಲಿ ಆಗದೆ ಇದ್ದರೆ ನೆಲ್ಲಿಕಾಯಿಯನ್ನು ತಿನ್ನುವುದು ಅತಿ ಉತ್ತಮವಾಗಿದೆ.
- ಮೂಲಂಗಿಯ ಬೀಜಗಳನ್ನು ನೀರಿನಲ್ಲಿ ಚೆನ್ನಾಗಿ ಅರೆಯಬೇಕು. ಈ ಅರೆದ ಮೂಲಂಗಿ ಬೀಜಗಳನ್ನು ಒಂದು ಲೋಟ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು. ಇದು ಕೂಡ ಕ್ರಮ ಬದ್ಧವಾದ ಋತುಚಕ್ರಕ್ಕೆ ಉತ್ತಮವಾಗಿದೆ.
ಋತುಸ್ರಾವವು ಅಧಿಕವಾಗಿದ್ದರೆ ಇಲ್ಲಿದೆ ಸುಲಭ ಪರಿಹಾರಗಳು
- ಮಾವಿನಕಾಯಿಯ ಸಿಪ್ಪೆಯನ್ನು ಕೊಂಚ ತುಪ್ಪದಲ್ಲಿ ಹುರಿದು, ಒಂದೆರಡು ಚಮಚ ಸೇವಿಸಿದರೆ ಅಧಿಕವಾದ ಋತುಸ್ರಾವ ಕಡಿಮೆಯಾಗುತ್ತದೆ.
- ಬಿಳಿ ದಾಸವಾಳದ ಹೂವನ್ನು ಚೆನ್ನಾಗಿ ತೊಳೆದು ನುಣ್ಣಗೆ ಅರೆಯಬೇಕು. ಅರೆದ ದಾಸವಾಳವನ್ನು ಒಂದು ಲೋಟ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಅತಿಯಾದ ಋತುಸ್ರಾವ ಕಡಿಮೆಯಾಗುತ್ತದೆ.
- ಬಾಳೆ ಹೂವನ್ನು ಆಹಾರದಲ್ಲಿ ಬಳಸುವುದು, ಹಾಗೆಯೇ ಬಾಳೆಹೂವನ್ನು ಮೊಸರಿನೊಂದಿಗೆ ಸೇವಿಸುವುದು ಕೂಡ ಅಧಿಕ ಸ್ರಾವಕ್ಕೆ ಉತ್ತಮವಾಗಿದೆ.
- ಒಂದು ಎಸಳು ಬೆಳ್ಳುಳ್ಳಿ, ಮೂರರಿಂದ ನಾಲ್ಕು ಕಹಿಬೇವಿನ ಎಲೆಗಳು ಹಾಗೂ ಕಾಲು ತುಂಡು ಅರಿಶಿನವನ್ನು ಸೇರಿಸಿ ಚೆನ್ನಾಗಿ ಅರೆದುಕೊಳ್ಳಬೇಕು. ಇದನ್ನು ಋತುಚಕ್ರದ ಮೂರು ದಿನದ ಮೊದಲಿನಿಂದ ದಿನಕ್ಕೆ ಒಮ್ಮೆ ಮೂರು ದಿನಗಳ ಕಾಲ ಸೇವಿಸಬೇಕು.
- ಬದನೆಯ ಚಿಕ್ಕ ಕಾಯಿಯನ್ನು ನೀರಿನೊಂದಿಗೆ ಅರೆದು ಶೋಧಿಸಿಕೊಳ್ಳಬೇಕು. ಇದನ್ನು ದಿನಕ್ಕೊಮ್ಮೆ ಸೇವಿಸುವುದರಿಂದ ಮಾಸಿಕದ ಅತ್ಯಧಿಕ ಸ್ರಾವವು ಕಡಿಮೆಯಾಗುತ್ತದೆ.
- ಮುಟ್ಟಿನ ಸಮಯದಲ್ಲಿ ಜಾಸ್ತಿ ಬಾರಿ ಲಿಂಬೆ ಹಣ್ಣಿನ ಶರಬತ್ತು ಕುಡಿಯುದರಿಂದ ಅಧಿಕ ಋತುಸ್ರಾವವು ಕಡಿಮೆಯಾಗುತ್ತದೆ.
- ಒಂದು ಚಮಚ ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಯಲು ಇಡಬೇಕು. ಅರ್ಧದಷ್ಟು ನೀರು ಇಂಗಿದ ನಂತರ ಶೋಧಿಸಿಕೊಂಡು ಸಕ್ಕರೆಯನ್ನು ಸೇರಿಸಿ ಬಿಸಿ ಬಿಸಿಯಾಗಿ ಕುಡಿಯಬೇಕು. ಇದನ್ನು ದಿನಕ್ಕೆ ಒಂದು ಬಾರಿ ಕುಡಿಯಬೇಕು. ಇದು ಅಧಿಕ ರಕ್ತಸ್ರಾವಕ್ಕೆ ಅತಿ ಉತ್ತಮವಾಗಿದೆ.
- ಗರಿಕೆಹುಲ್ಲು ಹಾಗೂ ಉತ್ತರಾಣೆ ಎಲೆಯನ್ನು ಅರೆದು, ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆಯನ್ನು ಸೇರಿಸಬೇಕು. ಈ ಮಿಶ್ರಣವನ್ನು ಹಾಲಿಗೆ ಬೆರೆಸಿ ಒಂದು ವಾರಗಳ ಕಾಲ ಸೇವಿಸಬೇಕು. ಇದು ಅಧಿಕ ಋತುಸ್ರಾವಕ್ಕೆ ಅತಿ ಉತ್ತಮವಾಗಿದೆ.
- ಕಾಮಕಸ್ತೂರಿ ಬೇಜವನ್ನು ರಾತ್ರಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಹಸುವಿನ ಹಾಲಿಗೆ ಬೆರೆಸಿ ಕುಡಿಯುವುದರಿಂದ ಅತಿಯಾದ ಋತುಸ್ರಾವವನ್ನು ತಡೆಯಲು ಉತ್ತಮವಾಗಿದೆ.
ಋತುಚಕ್ರವನ್ನು ತಡೆದಿದ್ದರೆ, ಮತ್ತೆ ಆರಂಭಗೊಳಿಸಲು ಇಲ್ಲಿದೆ ಸುಲಭ ಮನೆಮದ್ದುಗಳು
- ಸುವರ್ಣ ಗಡ್ಡೆಯನ್ನು ಹೋಳಾಗಿ ಕತ್ತರಿಸಿ ಒಣಗಿಸಬೇಕು. ಚೆನ್ನಾಗಿ ಒಣಗಿದ ಮೇಲೆ ಆರು ಗ್ರಾಂ ನಷ್ಟು ಒಣಗಿದ ಸುವರ್ಣಗಡ್ಡೆಯನ್ನು ಸ್ವಲ್ಪ ತುಪ್ಪ, ಜೇನುತುಪ್ಪ ಹಾಗೂ ಬೆಲ್ಲದ ಜೊತೆ ಸೇವಿಸಬೇಕು. ಇದು ತಡೆದಿಟ್ಟ ಮಾಸಿಕ ದಿನಗಳನ್ನು ಮತ್ತೆ ಆರಂಭಿಸುತ್ತದೆ.
- ಕ್ಯಾರೆಟ್ ನ ಬೀಜಗಳನ್ನು ಚೆನ್ನಾಗಿ ಅರೆದು, ಶೋಧಿಸಿಕೊಂಡು ಸೇವಿಸಬೇಕು. ಇದು ಕೂಡ ತಡೆದಿಟ್ಟ ಮುಟ್ಟಿನ ದಿನಗಳನ್ನು ಆರಂಭಿಸಲು ಸಹಾಯಕವಾಗಿದೆ.
- ಮೂಲಂಗಿ ಬೀಜ, ಮೆಂತ್ಯ ಕಾಳು ಹಾಗೂ ಗಜ್ಜರಿ ಬೀಜಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಇದನ್ನು ಪ್ರತಿ ದಿನ ಸಣ್ಣ ಚಮಚ ಸ್ವೀಕರಿಸಿ, ಬಿಸಿ ನೀರನ್ನು ಕುಡಿಯಬೇಕು. ಇದು ಕೂಡ ತಡೆದಿಟ್ಟ ಮುಟ್ಟಿನ ದಿನಗಳನ್ನು ಆರಂಭಿಸಲು ಸಹಾಯಕವಾಗಿದೆ.
ಮಹಿಳೆಯರು ತಮ್ಮ ಅರೋಗ್ಯವನ್ನು ಉತ್ತಮ ಆಹಾರ ಪದ್ಧತಿಯಿಂದ ಕಾಪಾಡಿಕೊಳ್ಳಬೇಕು. ತರಕಾರಿ, ಸೊಪ್ಪುಗಳ ಬಳಕೆ ಹಾಗೂ ಹಣ್ಣುಗಳ ಸೇವನೆ ಇವೆಲ್ಲವೂ ಉತ್ತಮವಾಗಿದೆ. ಅಧಿಕವಾಗಿ ನೀರನ್ನು ಕುಡಿಯುವುದು, ದೇಹವನ್ನು ತಂಪಾಗಿರಿಸುವುದು ಕೂಡ ಬಹು ಮುಖ್ಯ. ಈ ಲೇಖನದಲ್ಲಿ ವಿವಿವರಿಸಲಾದ ಮಾಹಿತಿಗಳ ಉಪಯೋಗಗಳನ್ನು ಪಡೆದುಕೊಂಡು ಸಮಸ್ಯೆಗಳಿಂದ ದೂರವಾಗಿರಿ ಎಂಬುದೊಂದು ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.