ಜೀರಿಗೆ ಮತ್ತು ಅದರ ವಿಶೇಷ ಆರೋಗ್ಯ ಪ್ರಯೋಜನಗಳು ನಿಮಗೆಷ್ಟು ಗೊತ್ತು?

Spread the love

ಜೀರಿಗೆ ಮತ್ತು ಅದರ ವಿಶೇಷ ಆರೋಗ್ಯ ಪ್ರಯೋಜನಗಳು ನಿಮಗೆಷ್ಟು ಗೊತ್ತು?
ಜೀರಿಗೆ ಮತ್ತು ಅದರ ವಿಶೇಷ ಆರೋಗ್ಯ ಪ್ರಯೋಜನಗಳು ನಿಮಗೆಷ್ಟು ಗೊತ್ತು? AI Image

ನಮ್ಮ ಮನೆಗಳಲ್ಲಿ ದಿನನಿತ್ಯ ಉಪಯೋಗವಾಗುವ ಸಾಂಬಾರು ಪದಾರ್ಥಗಳಲ್ಲಿ ಒಂದು ಎನ್ನಬಹುದಾದ ವಸ್ತು ಎಂದರೆ ಜೀರಿಗೆ. ತನ್ನ ವಿಶೇಷ ಗುಣಗಳಿಂದ, ಸ್ವಾದದಿಂದ ಎಲ್ಲರ ಮನೆಯ ಅಡುಗೆ ಮನೆಯಲ್ಲಿ ರಾರಾಜಿಸುವ ಜೀರಿಗೆಯು ಅರೋಗ್ಯವರ್ಧಕವು ಹೌದು, ಹಾಗೆಯೇ ಅತ್ಯಧಿಕ ಪಿತ್ತದ ಕಾರಣಗಳಿಂದ ಉಂಟಾಗುವ ತೊಂದರೆಗಳಿಗೆ ಜೀರಿಗೆಯು ರಾಮಬಾಣವಾಗಿದೆ. ಮನೆಯಲ್ಲಿ ಒಗ್ಗರಣೆಯಿಂದ ಹಿಡಿದು ಆರೋಗ್ಯಕರ ಮನೆಮದ್ದುಗಳ ತನಕ ಜೀರಿಗೆಯ ಉಪಯೋಗ ಮಹತ್ತರವಾಗಿದೆ. ಇಂತಹ ಜೀರಿಗೆಯ ಬಗೆಗಿನ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬೆಗ್ಗೆ ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಜೀರಿಗೆಯ ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು – ಕುಮಿನಮ್ ಸಿಮಿನಮ್ (Cuminum Cyminum) 
ಆಂಗ್ಲ ಹೆಸರು – ಕ್ಯೂಮಿನ್ ( Cumin )

ಜೀರಿಗೆಯು ಸಾಮಾನ್ಯವಾಗಿ ಎರಡು ವಿಧಾದಲ್ಲಿ ಕಂಡು ಬರುತ್ತದೆ. ಒಂದು ಕಪ್ಪು ಜೀರಿಗೆ ಇನ್ನೊಂದು ಸಾಮಾನ್ಯವಾಗಿ ನಾವು ನಿತ್ಯ ಬಳಸುವ ಜೀರಿಗೆ. ಜೀರಿಗೆಯ ಸುವಾಸನೆ ಮತ್ತು ಸ್ವಾದ ಎರಡು ಕೂಡ ವಿಶೇಷವಾಗಿದ್ದು, ಉತ್ತಮವಾಗಿದೆ. ಕುಮಿನಾಲ್ಡಿಹೈಡ್ (Cuminaldehyde) ಅಂಶವು ಜೀರಿಗೆಯ ವಿಶೇಷ ಸುವಾಸನೆಗೆ ಕಾರಣವಾಗಿದ್ದು, ಜೊತೆಗೆ ಟರ್ಪೀನ್‌ಗಳು (Terpenes) ಕೂಡ ಇರುವುದರಿಂದ ಇದು ಪರಿಮಳಕ್ಕೆ ತನ್ನದೇ ಕೊಡುಗೆಯನ್ನು ನೀಡುತ್ತದೆ. ಹಾಗೆಯೇ ವಿಟಮಿನ್ ಎ, ವಿಟಮಿನ್ ಸಿ ಹಾಗೂ ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಇ ಇದ್ದು, ಕಾರ್ಬೋಹೈಡ್ರೈಟ್, ನಾರು, ಕೊಬ್ಬು, ಪ್ರೊಟೀನ್, ಕಬ್ಬಿಣ, ರಂಜಕ, ಮ್ಯಾಂಗನೀಸ್, ಕ್ಯಾಲ್ಸಿಯಂ ಹಾಗೂ ಮ್ಯಾಗ್ನಿಶಿಯಂನಂತಹ ಅನೇಕ ಖನಿಜಗಳನ್ನು ಜೀರಿಗೆ ಒಳಗೊಂಡಿದೆ. ಈಗ ಜೀರಿಗೆಯ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ಅರಿಯೋಣ.

ಜೀರಿಗೆಯ ಕೆಲವು ಆರೋಗ್ಯಕರ ಮನೆಮದ್ದುಗಳು

ಪಿತ್ತದ ಕಾರಣದಿಂದ ಉಂಟಾಗುವ ಅನೇಕ ಸಮಸ್ಯೆಗಳಿಗೆ ಜೀರಿಗೆ ರಾಮಬಾಣವಾಗಿದೆ.

  • ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಸೇರಿಸಿ ಕುದಿಸಬೇಕು, ಅರ್ಧದಷ್ಟು ನೀರು ಇಂಗಿದ ಮೇಲೆ ಓಲೆ ಆರಿಸಿ ಜೀರಿಗೆ ಕಷಾಯವನ್ನು ಶೋಧಿಸಿಕೊಳ್ಳಬೇಕು. ಈ ಜೀರಿಗೆ ಕಷಾಯಕ್ಕೆ ಕಾಲು ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಪಿತ್ತದ ಸಮಸ್ಯೆಗಳು ಕಡಿಮೆಯಾಗುತ್ತದೆ.
  • ಪಿತ್ತದ ಕಾರಣದಿಂದ ಬರುವ ವಾಕರಿಕೆ, ಹೊಟ್ಟೆ ತೊಳಿಸುವಿಕೆ, ತಲೆ ತಿರುಗುವಿಕೆ, ಇವೆಲ್ಲ ಸಮಸ್ಯೆಗಳಿಗೆ ಜೀರಿಗೆ ಉತ್ತಮ ಮದ್ದಾಗುತ್ತದೆ. ಜೀರಿಗೆ, ಹುಳಿ ಹಾಗೂ ಬೆಲ್ಲವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಸಣ್ಣ ಗೋಲಿ ಗಾತ್ರದ ಉಂಡೆಗಳಾಗಿ ಮಾಡಿಕೊಳ್ಳಬೇಕು. ಈ ಉಂಡೆಗಳನ್ನು ಸೇವಿಸುವುದರಿಂದ ಪಿತ್ತದ ಕಾರಣದಿಂದ ಬರುವ ಸಕಲ ಸಮಸ್ಯೆಗಳಿಗೂ ಉತ್ತಮ ಪರಿಹಾರಗಳು ಸಿಗುತ್ತದೆ. ಪಿತ್ತದ ಸಮಸ್ಯೆಗಳಿಂದ ಬರುವ ಹುಳಿತೆಗಿಗೂ ಇದು ಉತ್ತಮ ಪರಿಹಾರವಾಗಿದೆ.
  • ಪಿತ್ತದ ಸಮಸ್ಯೆಗೆ ತ್ವರಿತ ಪರಿಹಾರವನ್ನು ನಾವು ಜೀರಿಗೆಯಿಂದ ಪಡೆಯಬಹುದು. ಜೀರಿಗೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಕಡೆದ ಒಂದು ಲೋಟ ಮಜ್ಜಿಗೆಯಲ್ಲಿ ಒಂದು ಚಮಚ ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯಬೇಕು. ಇದು ಪಿತ್ತಕ್ಕೆ ಉತ್ತಮವಾದ ಔಷಧವಾಗಿದೆ. ಪ್ರತಿದಿನ ಊಟವಾದ ನಂತರ ಮಜ್ಜಿಗೆಗೆ ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯುವುದು ಜೀರ್ಣಕ್ರಿಯೆಗೂ ಉತ್ತಮವಾಗಿದೆ, ಹಾಗೆಯೇ ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎಂದಿಗೂ ಬಾಧಿಸುವುದಿಲ್ಲ.
  • ಪಿತ್ತದ ಸಮಸ್ಯೆಗಳಿಗೆ ಮತ್ತೊಂದು ಉತ್ತಮ ಮನೆಮದ್ದು ಎಂದರೆ ಹೆರಳೆ ಹಣ್ಣನ್ನು ಎರಡು ಭಾಗವಾಗಿಸಿ, ಹೆರಳೆ ಹಣ್ಣಿನಲ್ಲಿ ಜೀರಿಗೆ ಪುಡಿಯನ್ನು ತುಂಬಿ, ಹಣ್ಣಿನ ಎರಡು ಹೋಳುಗಳನ್ನು ಸರಿಯಾಗಿ ಮುಚ್ಚಿಕೊಂಡು ಬಿಸಿ ಬೂದಿಯಲ್ಲಿ ಇಡಬೇಕು. ಕೆಲವು ಹೊತ್ತಿನ ನಂತರ ಹಣ್ಣನ್ನು ಬೂದಿಯಿಂದ ತೆಗೆದು ಹಣ್ಣಿನ ರಸವನ್ನು ಚೆನ್ನಾಗಿ ಹಿಂಡಿಕೊಳ್ಳಬೇಕು. ಈ ರಸವನ್ನು ಖಾಲಿ ಹೊಟ್ಟೆಗೆ ನಿತ್ಯ ಸೇವಿಸಬೇಕು. ಇದನ್ನು ಸತತವಾಗಿ ಸೇವಿಸುವುದರಿಂದ ಪಿತ್ತದ ಸಕಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ, ಹಾಗೆಯೇ ಮುಂದೆ ಪಿತ್ತದಿಂದ ಬರುವ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗುತ್ತದೆ.
  • ಪಿತ್ತದ ಸಮಸ್ಯೆಗೆ ಇನ್ನೊಂದು ಉತ್ತಮ ಪರಿಹಾರವೆಂದರೆ ಪ್ರತಿದಿನ ಒಂದು ಚಮಚ ಹುಣಸೆಹಣ್ಣಿನ ಗೊಜ್ಜು, ಒಂದು ಚಮಚ ಜೀರಿಗೆ ಹಾಗೂ ಒಂದು ಚಮಚ ಜೇನುತುಪ್ಪ ಇವು ಮೂರನ್ನು ಕಲಸಿ, ಸೇವಿಸಬೇಕು. ಇದು ಪಿತ್ತದ ಸರ್ವ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ –
– ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು
ಹುಣಸೆ ಹಣ್ಣಿನ(Tamarind) ಆರೋಗ್ಯಕರ ಲಾಭಗಳು ಮತ್ತು ಉಪಯೋಗಗಳು

ಅಜೀರ್ಣದಂತಹ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಜೀರಿಗೆಯ ಉತ್ತಮ ಪರಿಹಾರಗಳು

    • ಹೊಟ್ಟೆಗೆ ಸಂಬಂಧಪಟ್ಟ ಮುಖ್ಯವಾದ ಸಮಸ್ಯೆಗಳು ಎಂದರೆ ಆಜೀರ್ಣ, ಹೊಟ್ಟೆ ತೊಳಿಸುವಿಕೆ, ಅತಿಸಾರ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಜೀರಿಗೆಯಿಂದ ತ್ವರಿತವಾಗಿ ಪರಿಹಾರಗಳನ್ನು ಪಡೆದುಕೊಳ್ಳಬಹುದು. ಈ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಸೇರಿಸಿ, ಕುದಿಸಿಕೊಳ್ಳಬೇಕು. ಅರ್ಧದಷ್ಟು ನೀರು ಇಂಗಿದ ನಂತರ ಓಲೆ ಆರಿಸಿ ಶೋಧಿಸಿಕೊಳ್ಳಬೇಕು. ಶೋಧಿಸಿಕೊಂಡ ಜೀರಿಗೆ ಕಷಾಯಕ್ಕೆ ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಸೇರಿಸಿ, ಸ್ವಲ್ಪ ಉಪ್ಪನ್ನು ಕೂಡ ಬೆರೆಸಿ ಊಟದ ನಂತರ ಕುಡಿದರೆ ಹೊಟ್ಟೆಗೆ ಸಂಬಂಧಪಟ್ಟ ಸಕಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
    • ಸಾಮಾನ್ಯವಾಗಿ ಬರುವ ಹೊಟ್ಟೆ ನೋವಿಗೂ ಜೀರಿಗೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಜೀರಿಗೆ, ಸಕ್ಕರೆ, ಒಣಶುಂಠಿ ಪುಡಿ ಹಾಗೂ ಅಡುಗೆ ಉಪ್ಪನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು, ಪುಡಿಮಾಡಿಕೊಳ್ಳಬೇಕು. ಒಂದು ಲೋಟ ಬಿಸಿ ನೀರಿಗೆ ಒಂದೆರಡು ಚಮಚ ಲಿಂಬೆ ರಸವನ್ನು ಬೆರೆಸಿ, ತಯಾರಿಸಿದ ಪುಡಿಯನ್ನು ಒಂದು ಚಮಚ ಬೆರೆಸಿ, ಕುಡಿಯಬೇಕು. ಇದು ಹೊಟ್ಟೆ ನೋವನ್ನು ತ್ವರಿತವಾಗಿ ಕಡಿಮೆಯಾಗಿಸುತ್ತದೆ.

ಬೆವರಿನ ಗುಳ್ಳೆಗಳ ನಿವಾರಣೆಗೆ ಜೀರಿಗೆಯ ಉತ್ತಮ ಪರಿಹಾರಗಳು.

  • ಬೆವರಿನ ಗುಳ್ಳೆಗಳು ಆಗುವ ಸಮಯದಲ್ಲಿ ಮೈಯನ್ನು ಆದಷ್ಟು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಬೆವರಿನ ಗುಳ್ಳೆಗಳು ನಿವಾರಿಸಲು ಮೊದಲು ಜೀರಿಗೆಯನ್ನು ಒಣಗಿಸಿ ಪುಡಿಮಾಡಿಕೊಳ್ಳಬೇಕು. ತೆಂಗಿನ ಹಾಲಿನಲ್ಲಿ ಈ ಜೀರಿಗೆ ಪುಡಿಯನ್ನು ಬೆರೆಸಿ ಗುಳ್ಳೆಗಳು ಇರುವ ಕಡೆಯಲ್ಲಿ ಹಚ್ಚಬೇಕು. ಹೀಗೆ ಸತತವಾಗಿ ಕೆಲವು ದಿನಗಳು ಹಚ್ಚಿದ ನಂತರ ಗುಳ್ಳೆಗಳು ಕಡಿಮೆಯಾಗುತ್ತದೆ. ಗುಳ್ಳೆಗಳಿಂದ ಉಂಟಾಗುವ ನವೆ, ಕೆರೆತ ಎಲ್ಲವೂ ಕೂಡ ಕ್ರಮೇಣ ಕಡಿಮೆಯಾಗುತ್ತದೆ. ಬೆವರು ಸಾಲೆಯಾದ ಸಂದರ್ಭದಲ್ಲಿ ನಾವು ಆಹಾರದಲ್ಲಿ ಸಕ್ಕರೆ ಬಳಕೆಯನ್ನು ಕಡಿಮೆಗೊಳಿಸಬೇಕು. ಈ ಸಮಯದಲ್ಲಿ ತಾಜಾ ಹಣ್ಣು, ತರಕಾರಿ ಹಾಗೂ ಎಳೆನೀರನ್ನು ಸೇವಿಸುವುದು ಉತ್ತಮವಾಗಿದೆ.

ಮಲಬದ್ಧತೆಯ ಸಮಸ್ಯೆಗೆ ಜೀರಿಗೆಯ ಪರಿಹಾರಗಳು

  • ಜೀರಿಗೆಯು ಉತ್ತಮ ಜೀರ್ಣಕರಕವಾಗಿದ್ದು, ಊಟಕ್ಕೆ ಮೊದಲು ಜಗಿದು ಸೇವಿಸಿದರೆ, ಹೊಟ್ಟೆಯ ಹಸಿವನ್ನು ಹೆಚ್ಚಿಸುತ್ತದೆ. ಹಾಗೆಯೇ ಊಟದ ನಂತರ ಸ್ವಲ್ಪ ಜೀರಿಗೆಯನ್ನು ಸೇವಿಸುವುದರಿಂದ ಸೇವಿಸಿದ ಆಹಾರ ಜೀರ್ಣವಾಗುತ್ತದೆ. ಇದು ಆಹಾರದ ಜೀರ್ಣಕ್ರಿಯೆಯಲ್ಲಿ ಉತ್ತಮ ಪಾತ್ರವನ್ನು ವಹಿಸುತ್ತದೆ. ಯಾವುದೇ ರೀತಿಯ ಮಲಬದ್ಧತೆಯ ಸಮಸ್ಯೆಗಳು ಬಾಧಿಸುವುದಿಲ್ಲ. ಜೀರಿಗೆಯನ್ನು ಅಗೆದು ತಿನ್ನುವುದು ಹಲ್ಲುಗಳ ಅರೋಗ್ಯಕ್ಕೂ ಉತ್ತಮವಾಗಿದೆ.

ಗರ್ಭಿಣಿಯರ ಉತ್ತಮ ಆರೋಗ್ಯಕ್ಕೆ ಜೀರಿಗೆ ಕಷಾಯ ಉತ್ತಮವಾಗಿದೆ.

  • ಗರ್ಭಿಣಿಯರು ತಮ್ಮ ಅರೋಗ್ಯವನ್ನು ನಾಜುಕಾಗಿ ಕಾಪಾಡಿಕೊಳ್ಳಬೇಕು. ಈ ಗರ್ಭಧಾರಣೆಯ ಸಮಯದಿಂದ ನಿತ್ಯವೂ ಜೀರಿಗೆ ಕಷಾಯವನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಒಂದು ಲೋಟ ನೀರಿಗೆ ಜೀರಿಗೆಯನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು. ನಂತರ ಹಾಲು ಮತ್ತು ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಇದು ಗರ್ಭಿಣಿಯ ಆರೋಗ್ಯಕ್ಕೆ ಉತ್ತಮವಾಗಿದ್ದು, ಸುಲಭವಾದ ಹೆರಿಗೆಗೂ ಒಳ್ಳೆಯದಾಗಿದೆ. ಹಾಗೆಯೇ ಇದು ಮಗುವಿನ ಉತ್ತಮ ಬೆಳವಣಿಗೆಗೂ ಉತ್ತಮವಾಗಿದೆ.

ಭೇದಿಯ ಸಮಸ್ಯೆಗೆ ಜೀರಿಗೆಯ ಪರಿಹಾರಗಳು

  • ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆ  ಹಾಗೂ ಒಂದು ಚಮಚ ಕೊತ್ತಂಬರಿ ಪುಡಿಯನ್ನು ಸೇರಿಸಿ, ಐದು ಗಂಟೆಗಳ ಕಾಲ ನೆನೆಸಿ ಇಡಬೇಕು. ನಂತರ ಮಿಶ್ರಣವನ್ನು ಚೆನ್ನಾಗಿ ಕಿವುಚಿ, ಸೋಸಿಕೊಂಡು ಕುಡಿಯಬೇಕು. ಇದರಿಂದ ಭೇದಿಯು ನಿಲ್ಲುತ್ತದೆ. ಇದನ್ನು ಗಂಟೆಗೆ ಒಮ್ಮೆಯಂತೆ ಸೇವಿಸಬೇಕು. ಇದು ತ್ವರಿತವಾಗಿ ಪರಿಣಾಮವನ್ನು ಬೀರುತ್ತದೆ.

ಹೆಣ್ಣುಮಕ್ಕಳ ಮಾಸಿಕ ಸಮಯದಲ್ಲಿ ಬರುವ ಹೊಟ್ಟೆ ನೋವಿನ ನಿವಾರಣೆಗೆ ಜೀರಿಗೆಯು ಉತ್ತಮ ಮದ್ದಾಗಿದೆ.

  • ಪ್ರತಿ ತಿಂಗಳು ಹೆಣ್ಣು ಮಕ್ಕಳು ಅನುಭವಿಸುವ ಮುಟ್ಟಿನ ಸಮಯದ ಹೊಟ್ಟೆ ನೋವನ್ನು ಕಡಿಮೆಗೊಳಿಸಲು ಜೀರಿಗೆ ಉತ್ತಮ ಪರಿಹಾರವಾಗಿದೆ. ಮುಟ್ಟಿನ ದಿನಗಳು ಹತ್ತಿರದಲ್ಲಿ ಇದ್ದಾಗ, ದೇಹದಲ್ಲಿ ಉಂಟಾಗುವ ಸುಸ್ತು, ಆಯಾಸ, ಮೈ ಕೈ ನೋವುಗಳು, ಹಾಗೆಯೇ ಹೊಟ್ಟೆ ಮತ್ತು ಬೆನ್ನು ನೋವುಗಳು ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ. ಅಂತಹ ಸಮಯದಲ್ಲಿ ಸುಸ್ತು ಆರಂಭವಾದಾಗಲೇ ಪ್ರತಿದಿನ ಜೀರಿಗೆ ಕಷಾಯವನ್ನು ಕುಡಿಯುವುದು ಅತಿ ಉತ್ತಮವಾಗಿದೆ. ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಸೇರಿಸಿ, ಅರ್ಧದಷ್ಟು ಇಂಗಿಸಿ, ಶೋಧಿಸಿಕೊಂಡು ಕುಡಿಯಬೇಕು. ಇದನ್ನು ನೋವಿರುವ ತನಕ ಕುಡಿಯಬೇಕು. ಹೀಗೆ ಕುಡಿಯುತ್ತ ಬಂದರೆ ಕ್ರಮೇಣ ಮುಟ್ಟಿನ ಸಮಯದ ನೋವುಗಳು ಕಡಿಮೆಯಾಗುತ್ತದೆ.

ಇನ್ನೂ ಜೀರಿಗೆಯು ಪ್ರತಿದಿನ ಅಡುಗೆಯಲ್ಲಿ ಬಳಕೆಯಾಗುವ ಮುಖ್ಯ ವಸ್ತುವಾಗಿದೆ. ಪ್ರತಿದಿನ ಮಾಡುವ ಸಾಂಬಾರಿಗೆ ಮಸಾಲೆಯನ್ನು ರುಬ್ಬುವ ಸಂದರ್ಭದಲ್ಲಿ ಸ್ವಲ್ಪ ಜೀರಿಗೆಯನ್ನು ಹುರಿದು ಮಸಾಲೆ ತಯಾರಿಸುವುದು ಉತ್ತಮವಾಗಿದೆ, ಇದು ರುಚಿಯನ್ನು ಹೆಚ್ಚಿಸಿ, ಹೊಟ್ಟೆಯಲ್ಲಿ ಆಗುವ ವಾಯು ಉತ್ಪತ್ತಿಯನ್ನು ಕಡಿಮೆಗೊಳಿಸುತ್ತದೆ. ನಿತ್ಯ ಒಗ್ಗರಣೆಗೆ, ಪಲ್ಯಕ್ಕೆ ಹೆಚ್ಚಾಗಿ ಜೀರಿಗೆ ಬೇಕೇ ಬೇಕು. ಜೀರಿಗೆಯ ಉಪಯೋಗವು ಅರೋಗ್ಯವರ್ಧಕವಾಗಿದ್ದು, ದೇಹದಲ್ಲಿನ ಕೊಬ್ಬನ್ನು ಕರಗಿಸುವ ಶಕ್ತಿಯನ್ನು ಕೂಡ ಹೊಂದಿದೆ. ಹಾಗೆಯೇ ಕ್ಯಾನ್ಸರ್ ಕಾರಕ ವಸ್ತುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕೂಡ ನಾವು ಜೀರಿಗೆಯ ಸೇವನೆಯಿಂದ ಪಡೆಯಬಹುದು. ಅಂದರೆ ಜೀರಿಗೆ ರೋಗ ನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಉಪಯುಕ್ತವಾಗಿದ್ದು, ಮಧುಮೇಹಿಗಳ ಸೇವನೆಗೆ ಉತ್ತಮವಾಗಿದೆ. ಉತ್ತಮ ಜೀರ್ಣಕಾರಕವಾಗಿದ್ದು, ಪಿತ್ತದೋಷಕ್ಕೆ ಪರಮೌಷಧವಾಗಿದೆ. ಇಂದಿನ ಲೇಖನದಲ್ಲಿ ನಾವು ಜೀರಿಗೆಯ ಬಗೆಗಿನ ಅನೇಕ ಮಾಹಿತಿಗಳನ್ನು ವಿಶ್ಲೇಷಿಸಿದ್ದು, ಜೀರಿಗೆಯ ಪ್ರಯೋಜನಗಳನ್ನು ಪಡೆದು ಸಮಸ್ಯೆಗಳಿಂದ ಪಾರಾಗಿರಿ ಎಂಬುದು ನಮ್ಮ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top