ಮಧುಮೇಹದ ಸಂಪೂರ್ಣ ಮಾರ್ಗದರ್ಶಿ: ಮನೆಮದ್ದು ಮತ್ತು ಸಲಹೆಗಳು

Spread the love

ಮಧುಮೇಹದ ಸಂಪೂರ್ಣ ಮಾರ್ಗದರ್ಶಿ: ಮನೆಮದ್ದು ಮತ್ತು ಸಲಹೆಗಳು
ಮಧುಮೇಹದ ಸಂಪೂರ್ಣ ಮಾರ್ಗದರ್ಶಿ: ಮನೆಮದ್ದು ಮತ್ತು ಸಲಹೆಗಳು. AI Image

ಪ್ರಸ್ತುತ ದಿನಮಾನದಲ್ಲಿ ನಾವು ಅಧಿಕವಾಗಿ ಅನುಭವಿಸುವ ಸಮಸ್ಯೆ ಎಂದರೆ ಅದು ಸಕ್ಕರೆ ಖಾಯಿಲೆ ಅಥವಾ ಮಧುಮೇಹ. ವಯೋಸಹಜವಾಗಿ ಬರುವುದು ಸಾಮಾನ್ಯ ಆದರೆ ಈಗ ಸಣ್ಣ ವಯಸ್ಸಿಗೆ ಮಧುಮೇಹ ಖಾಯಿಲೆಗೆ ತುತ್ತಾಗುವುದು ಜಾಸ್ತಿಯಾಗಿದೆ. ಕೆಲವೊಂದು ಶಿಶುಗಳಿಗೆ ಹುಟ್ಟಿನ ಸಮಯದಲ್ಲೇ ಸಕ್ಕರೆ ಖಾಯಿಲೆ ಆರಂಭವಾಗುತ್ತದೆ. ಇದಕ್ಕೆಲ್ಲಾ ಅನೇಕ ಕಾರಣಗಳಿದ್ದು, ಸದ್ಯ ಪರಿಹಾರವೇನೆಂದು ಕಂಡುಕೊಳ್ಳಬೇಕಿದೆ. 

ಈ ಪ್ರಸ್ತುತ ಲೇಖನದಲ್ಲಿ ಮಧುಮೇಹಕ್ಕೆ ಉಪಯುಕ್ತವಾಗಿರುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ.

  • ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಎರಡು ಎಸಳು ಬೆಳ್ಳುಳ್ಳಿಯನ್ನು ಕಚ್ಚಿ ತಿನ್ನಬೇಕು.
  • ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು 10 ದಳ ಕರಿಬೇವನ್ನು ಜಗಿದು ತಿನ್ನಬೇಕು. 
  • ಮೆಂತೆಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ನಿತ್ಯ ಬೆಳಿಗ್ಗೆ ಒಂದು ಲೋಟ ಕುದಿಸಿ ಆರಿದ ನೀರಿಗೆ ಒಂದು ಚಮಚ ಮೆಂತೆ ಪುಡಿಯನ್ನು ಬೆರೆಸಿ ಕುಡಿದರೆ ಸಕ್ಕರೆ ಖಾಯಿಲೆಗೆ ಸಹಾಯಕವಾಗುತ್ತದೆ.
  • ಮೆಂತ್ಯ ಕಾಳನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಿಗ್ಗೆ ಎದ್ದ ಕೂಡಲೇ ನೆನೆಸಿದ ನೀರನ್ನು ಮಾತ್ರ ಕುಡಿಯಬೇಕು. ಇದರಿಂದ ರಕ್ತದ ಸಕ್ಕರೆ ಅಂಶವು ನಿಯಂತ್ರಣದಲ್ಲಿ ಇರುತ್ತದೆ.
  • ಸಕ್ಕರೆ ಖಾಯಿಲೆ ಆರಂಭಿಕ ಹಂತದಲ್ಲೇ ಇರುವಾಗ ನಿತ್ಯ ಮೆಂತ್ಯ ಸೊಪ್ಪಿನ ರಸವನ್ನು ತಯಾರಿಸಿಕೊಂಡು ಬೆಳಿಗ್ಗೆ ಒಂದು ಅರ್ಧ ಲೋಟ ಕುಡಿಯುತ್ತಿದ್ದರೆ ಮಧುಮೇಹ ಹೆಚ್ಚಾಗುವುದಿಲ್ಲ.
  • ಹಾಗಲಕಾಯಿ ಮಧುಮೇಹಿಗಳಿಗೆ ಅತಿ ಉತ್ತಮ ಆಹಾರವಾಗಿದೆ. ದಿನಾಲೂ ಒಂದು ಸಣ್ಣ ಹಾಗಲಕಾಯಿಯನ್ನು ಕಚ್ಚಿ ತಿನ್ನಬೇಕು. ಇಲ್ಲವೇ ಹಾಗಲಕಾಯಿ ಜ್ಯೂಸ್ ಮಾಡಿ ಕುಡಿಯಬೇಕು. ಹಾಗಲಕಾಯಿ ನಮ್ಮ ದೇಹದ ಸಕ್ಕರೆ ಅಂಶವನ್ನು ಜಾಸ್ತಿ ಆಗದಂತೆ ನಿಯಂತ್ರಿಸುತ್ತದೆ.
  • ಹಾಗಲಕಾಯಿ ಗಿಡದ ಸೊಪ್ಪನ್ನು ನೀರಿನಲ್ಲಿ ಕುದಿಸಿ ನಂತರ ಶೋಧಿಸಿ ಕುಡಿಯುವುದು ಕೂಡ ಮಧುಮೇಹಕ್ಕೆ ಉತ್ತಮವಾಗಿದೆ.
  • ಮಧುಮೇಹಿಗಳಿಗೆ ಅರಿಶಿನ ಉತ್ತಮವಾಗಿದ್ದು, ಪ್ರತಿನಿತ್ಯ 1/2 ಚಮಚ ಅರಿಶಿನವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ಇದು ಸುಲಭ ಹಾಗೂ ಉತ್ತಮ ಪರಿಹಾರವಾಗಿದೆ.
  • ಒಂದು ಬೆಟ್ಟದ ನೆಲ್ಲಿಕಾಯಿ ಹಾಗೂ ಒಂದು ಅರಿಶಿಣದ ಕೊಂಬನ್ನು ಒಟ್ಟಿಗೆ ಪುಡಿಮಾಡಿಕೊಳ್ಳಬೇಕು. ಅನಂತರ ಅರ್ಧ ಚಮಚದಷ್ಟು ಪುಡಿಯನ್ನು ತಿಂದು ಅನಂತರ ಬಿಸಿಯಾದ ನೀರನ್ನು ಕುಡಿಯಬೇಕು.
  • ಹಾಗೆಯೇ ಬೆಟ್ಟದ ನೆಲ್ಲಿಕಾಯಿ ಹಾಗೂ ಹಸಿ ಅರಿಶಿನವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಎರಡನ್ನು ಚೆನ್ನಾಗಿ ರುಬ್ಬಿಕೊಂಡು ಅನಂತರ ಶೋಧಿಸಬೇಕು. ದಿನಾಲೂ ಎರಡು ಚಮಚ ಶೋಧಿಸಿದ ರಸಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ ಸೇವಿಸಬೇಕು. ಇದನ್ನು ಒಂದು ದಿನ ಬಿಡದೆ ನಿತ್ಯ ಮಾಡುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಅಂಶ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.
  • ಮೆಣಸಿನ ಕಾಯಿ ಗಿಡದ ಎಲೆಯನ್ನು ಚೆನ್ನಾಗಿ ತೊಳೆದು ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ನೀರು ಅರ್ಧದಷ್ಟು ಇಂಗಿದ ಮೇಲೆ ಶೋಧಿಸಿ ಕುಡಿಯಬೇಕು. ಇದರಿಂದ ದೇಹದಲ್ಲಿ ಇನ್ಸೂಲಿನ ಪ್ರಮಾಣ ಜಾಸ್ತಿಯಾಗುತ್ತದೆ ಹಾಗೆಯೇ ರಕ್ತನಾಳಗಳು ಶುದ್ಧವಾಗುತ್ತದೆ.
  • ಮುಸುಕಿನ ಜೋಳದ ಮೇಲ್ಪದರಲ್ಲಿರುವ ರೇಷ್ಮೆ ತರಹದ ಎಳೆಗಳನ್ನು ತೆಗೆದುಕೊಂಡು, ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿ ಕುಡಿಯಬೇಕು. ಕಸವೆಂದು ಬಿಸಾಡುವ ಈ ಎಳೆಗಳು ಎಷ್ಟು ಉಪಕಾರಿ ಅಲ್ಲವೆ? ಇದು ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಅತಿ ಉತ್ತಮವಾಗಿದೆ.
  • ಬಾಳೆಗಿಡದ ಬೇರನ್ನು ಚೆನ್ನಾಗಿ ತೊಳೆದು ಒಣಗಿಸಬೇಕು. ಒಣಗಿದ ನಂತರ ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಪ್ರತಿದಿನ ರಾತ್ರಿ ಒಂದು ಚಮಚ ತಿನ್ನಬೇಕು. ಇದು ಸಕ್ಕರೆ ಅಂಶ ತಗ್ಗಿಸಲು ಹಾಗೂ ಉತ್ತಮ ಪೋಷಕಾಂಶಗಳನ್ನು ಪೂರೈಸಲು ಸಹಕರಿಯಾಗಿದೆ.
  • ಎರಡು ಚಮಚ ಗೋಧಿಯನ್ನು ರಾತ್ರಿ ನೆನೆಸಿ ಬೆಳಗ್ಗೆ ನೆನೆಸಿದ ನೀರಿನಲ್ಲೇ ಗೋಧಿಯನ್ನು ನುಣ್ಣಗೆ ರುಬ್ಬಿಕೊಂಡು ಅದಕ್ಕೆ 1/2 ಚಮಚ ಒಣ ಶುಂಠಿಪುಡಿ ಹಾಗೂ 1/4 ಚಮಚ ಕರಿ ಮೆಣಸಿನಪುಡಿಯನ್ನು ಸೇರಿಸಿ ಒಂದು ತಿಂಗಳು ಸೇವಿಸಬೇಕು.
  • ಮಧುಮೇಹಕ್ಕೆ ಗೋಧಿ ಹುಲ್ಲನ್ನು ಜಜ್ಜಿ ರಸ ತೆಗೆದು ಒಂದು ತಿಂಗಳು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು. ಇದು ಅರೋಗ್ಯವರ್ಧಕವು ಹೌದು.
  • ಕಹಿಬೇವಿನ ಎಲೆಯನ್ನು ಚೆನ್ನಾಗಿ ಒಣಗಿಸಬೇಕು. ಒಣಗಿದ ಕಹಿಬೇವನ್ನು ಚೆನ್ನಾಗಿ ಪುಡಿಮಾಡಿಕೊಳ್ಳಬೇಕು. ಜೊತೆಗೆ ಓಂ ಕಾಳನ್ನು ಚೆನ್ನಾಗಿ ಪುಡಿ ಮಾಡಿ ಕಹಿಬೇವಿನ ಪುಡಿಗೆ ಬೆರೆಸಬೇಕು. ಈ ಎರಡು ಪುಡಿಗಳ ಮಿಶ್ರಣವನ್ನು ಪ್ರತಿನಿತ್ಯ ಒಂದು ಚಮಚ ಸೇವಿಸಿದರೆ ಮಧುಮೇಹ ಹತೋಟಿಗೆ ಬರುತ್ತದೆ.
  • ಬ್ರೊಕೊಲಿ ಸಲಾಡ್ ಸಕ್ಕರೆ ಖಾಯಿಲೆಗೆ ರುಚಿಕರ ಮದ್ದು. ಬ್ರೊಕೊಲಿಯನ್ನು ಚೆನ್ನಾಗಿ ತೊಳೆದುಕೊಂಡು ಅರ್ಧ ಬೇಯಿಸಿ ಕರಿ ಮೆಣಸಿನ ಪುಡಿಯನ್ನು ಚಿಟಿಕೆ ಸೇರಿಸಿ ಸಲಾಡ್ ತಯಾರಿಸಬೇಕು. ಇದು ತೂಕ ಇಳಿಸಲು ಕೂಡ ಉತ್ತಮ ಆಹಾರವಾಗಿದೆ.
  • ನಿಂಬೆ ಹುಲ್ಲನ್ನು ನೀರಿನಲ್ಲಿ ಕುದಿಸಿ ಶೋಧಿಸಿ ಕುಡಿಯುವುದು ಕೂಡ ಉತ್ತಮವಾಗಿದೆ. (ಓದಿ ನಿಂಬೆ ಹಣ್ಣಿನ ಮತ್ತಷ್ಟು ಉಪಯೋಗಗಳು)
  • ತುಂಬೆ ಎಲೆಗಳು, ಬೇವಿನ ಸೊಪ್ಪು ಹಾಗೂ ಓಂಕಾಳು ಮೂರನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ 1/2 ಚಮಚ ಸೇವಿಸಬೇಕು. ಇದು ಮಧುಮೇಹವನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರುತ್ತದೆ.

ಸಕ್ಕರೆ ಖಾಯಿಲೆ ಬಂದರೆ ಜೊತೆಗೆ ತನ್ನ ಕುಟುಂಬವನ್ನೇ ತಂದು ಬಿಡುತ್ತದೆ. ಅಂದೆರೆ ಮಧುಮೇಹದ ಜೊತೆಗೆ ಗಂಟಲು ಒಣಗುವಿಕೆ, ಬಾಯಾರಿಕೆ, ಪದೇ ಪದೇ ಮೂತ್ರಾಲಯಕ್ಕೆ ಹೋಗುವ ಸಮಸ್ಯೆಗಳು, ಬೇಗ ಹಸಿವಾಗುವಿಕೆ, ಕಣ್ಣು ಮಂದವಾಗುವುದು, ಗಾಯ ಬೇಗ ಒಣಗುವುದಿಲ್ಲ, ರಕ್ತ ಸೋರಿಕೆಯು ಬೇಗ ನಿಲ್ಲುವುದಿಲ್ಲ, ಹೀಗೆ ಇನ್ನು ಅನೇಕ ಸಮಸ್ಯೆಗಳನ್ನು ಜೊತೆಗೆ ಹೊತ್ತು ತರುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು ಈ ಲೇಖನದಲ್ಲಿ ವಿಶ್ಲೇಷಸಿದ ಎಲ್ಲಾ ಮನೆ ಮದ್ದುಗಳು ಅತಿ ಸೂಕ್ತವಾಗುದ್ದು, ಉತ್ತಮವಾಗಿದೆ. ಒಂದೆರಡು ದಿನದಲ್ಲಿ ಪರಿಹಾರ ಸಿಗುವುದಿಲ್ಲ, ಸತತವಾಗಿ ಒಂದು ತಿಂಗಳು ಪ್ರಯತ್ನಿಸಿ ಫಲಿತಾಂಶವನ್ನು ಪಡೆಯಬೇಕು. ಖಂಡಿತವಾಗಿ ನಿತ್ಯ ಮನೆ ಮದ್ದುಗಳ ಬಳಕೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top