
ಇಂದಿನ ನವೀನ ಯುಗದ ಆಹಾರ ಪದ್ಧತಿಯನ್ನು ನಾವು ಅನುಸರಿಸಿದರೆ ನಮ್ಮ ಹೊಟ್ಟೆ ತುಂಬಿದ ಪಾತ್ರೆಯಾಗಿ ಜಾಸ್ತಿಯಾದದ್ದನ್ನು ಬೇಗನೆ ಹೊರಹಾಕುತ್ತದೆ. ಹೀಗೆ ಅಜೀರ್ಣದ ಸಮಸ್ಯೆ ಪ್ರಾರಂಭವಾಗುತ್ತದೆ. ಬೇಕಾದಷ್ಟೇ ತಿಂದು ಹೊಟ್ಟೆಯ ಪ್ರಮಾಣವನ್ನು ಅರಿತು ಆರೋಗ್ಯಕರ ತಿನಿಸನ್ನು ತಿನ್ನುವುದು ಈಗಿನ ಕಾಲದಲ್ಲಿ ಕಡಿಮೆಯಾಗುತ್ತಿದೆ. ಹೊಟ್ಟೆಗೆ ಸರಿಯಾಗಿ ಜೀರ್ಣಕ್ರಿಯೆ ನಡೆಸಲು ಬೇಕಾದ ಪೌಷ್ಟಿಕಾಂಶಗಳ ಕೊರತೆ ಕೂಡ ಎದ್ದು ತೋರುತ್ತಿದ್ದೆ. ಇಂತಹ ಸಮಯದಲ್ಲಿ ಬೇಕಾಗುವ ಕೆಲವು ಸಲಹೆಗಳು ಹಾಗು ಮದ್ದಿನ ಬಗ್ಗೆ ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.
ಹಸಿ ಶುಂಠಿ ಲಡ್ಡು
ಬೇಕಾಗುವ ಪದಾರ್ಥಗಳು
- ಹಸಿ ಶುಂಠಿ 2 ದೊಡ್ಡ ಚೂರು
- ಬೆಲ್ಲದ ಪುಡಿ ½ ಕಪ್
- ಕಪ್ಪು ಉಪ್ಪು ರುಚಿಗೆ ತಕ್ಕಷ್ಟು
- ಜೀರಿಗೆ ಪುಡಿ 1 ಚಮಚ
- ಆಮ್ ಚೂರ್ ಪುಡಿ ½ ಚಮಚ
- ಪುಡಿ ಸಕ್ಕರೆ
- ತುಪ್ಪ
ವಿಧಾನ
ಶುಂಠಿಯನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ನೀರನ್ನು ಉಪಯೋಗಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ನಯವಾಗಿ ರುಬ್ಬಿದ ಮಿಶ್ರಣವನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಬೆಲ್ಲವನ್ನು ಸೇರಿಸಿ ಮತ್ತೆ ಹುರಿಯಬೇಕು. ಪಾಕ ಬಿಟ್ಟು ಗಟ್ಟಿಯಾದ ನಂತರ ಜೀರಿಗೆ ಪುಡಿ,ಆಮ್ ಚೂರ್ ಪುಡಿ ಹಾಗು ರುಚಿಗೆ ಉಪ್ಪು ಸೇರಿಸಿ ಮತ್ತೆ ಕಲಸಬೇಕು. ಮೇಲಿಂದ ಸ್ವಲ್ಪ ತುಪ್ಪ ಹಾಕಿ ನಂತರ ಮಿಶ್ರಣ ಪಾತ್ರೆ ಬಿಟ್ಟ ನಂತರ ಒಲೆ ಆರಿಸಿ ಸ್ವಲ್ಪ ಆರಿದ ನಂತರ ಸಣ್ಣ ಉಂಡೆ ಮಾಡಿ ಪುಡಿ ಸಕ್ಕರೆಯಲ್ಲಿ ಹೊರಳಿಸಿದರೆ ಹಸಿ ಶುಂಠಿ ಲಡ್ಡು ಸಿದ್ಧವಾಗುತ್ತದೆ.
ಅಜೀರ್ಣ ಎಂದೆನಿಸಿದಾಗ ಒಂದು ಉಂಡೆಯನ್ನು ತಿಂದರೆ ತಕ್ಷಣ ಪ್ರತಿಫಲವನ್ನು ಪಡೆಯಬಹುದು.
ಅಜೀರ್ಣಕ್ಕೆ ಇನ್ನಿತರ ಮನೆಮದ್ದುಗಳು
- ಹಸಿ ಮೂಲಂಗಿಯನ್ನು ತುರಿದು ಮೊಸರಿನ ಜೊತೆ ಸೇರಿಸಿ ಸೇವಿಸುವುದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
- ಜೀರಿಗೆ 2 ಚಮಚ , ಓಂ ಕಾಳು 1 ಚಮಚ ಎರಡನ್ನೂ ಪುಡಿ ಮಾಡಿ ಕೊಂಡು ಇಡಬೇಕು.ಪ್ರತಿ ದಿನ ರಾತ್ರಿ ಒಂದು ಲೋಟ ಕುಡಿಯುವ ನೀರಿಗೆ 1 ಚಮಚ ತಯಾರಿಸಿದ ಪುಡಿ ಹಾಕಿ ಮುಚ್ಚಿಡಬೇಕು. ಬೆಳಿಗ್ಗೆ ಶೋಧಿಸಿ ನೀರನ್ನು ಕುಡಿಯಬೇಕು. 1 ತಿಂಗಳು ಸತತವಾಗಿ ಈ ವಿಧಾನವನ್ನು ಪಾಲಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಕಡಿಮೆ ಆಗುತ್ತದೆ.
- ಆಹಾರವನ್ನು ಚೆನ್ನಾಗಿ ಅಗೆದು ತಿನ್ನಬೇಕು. ಮತ್ತು ಜಾಸ್ತಿ ನೀರನ್ನು ಕುಡಿಯುವುದು ಉತ್ತಮ. ಹಾಗೆಯೇ ಜಾಸ್ತಿ ಅಜೀರ್ಣ ಸಮಸ್ಯೆ ಇದ್ದರೆ ಹಣ್ಣು ಹಾಲನ್ನು ಸೇವಿಸಿ ಮಲಗುವುದು ಉತ್ತಮ.
- ಒಂದು ತುಂಡು ಶುಂಠಿಯನ್ನು, ತುಳಸಿ ಹಾಗೂ ಬೆಲ್ಲದ ಜೊತೆಯಲ್ಲಿ ಚೆನ್ನಾಗಿ ಅರೆದು ಸಣ್ಣ ಗುಳಿಗೆಯ ರೂಪದಲ್ಲಿ ತಯಾರಿಸಬೇಕು. ಊಟದ ಮುಂಚೆ ಒಂದು ಗುಳಿಗೆಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.
- ಪಪ್ಪಾಯ ಹಣ್ಣುಗಳನ್ನು ಕತ್ತರಿಸಿ ಜೀರಿಗೆ ಪುಡಿ, ಕರಿಮೆಣಸಿನ ಪುಡಿ, ಉಪ್ಪು ಉದುರಿಸಿ ಸ್ವಲ್ಪ ಲಿಂಬೆ ಹಣ್ಣನ್ನು ಹಿಂಡಿ ತಿನ್ನುವುದು ಜೀರ್ಣಕ್ರಿಯೆಗೆ ಉತ್ತಮವಾಗಿದೆ.
- ಹಸಿ ತರಕಾರಿಯನ್ನು ಉದಾಹರಣೆಗೆ ಕ್ಯಾರೆಟ್, ಸೌತೆಕಾಯಿ, ಹಸಿ ಟೊಮೆಟೊ ಈ ತರಹದ ಸಲಾಡ್ ಗಳು ಕೂಡ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
- ಈರುಳ್ಳಿ ಎಲೆಯನ್ನು ತೊಳೆದು ಅಗೆದು ತಿನ್ನಬೇಕು. ಇದರಿಂದ ಲಾಲಾಸರದ ಉತ್ಪತ್ತಿ ಜಾಸ್ತಿಯಾಗಿ, ಜೀರ್ಣಕ್ರಿಯೆ ಉತ್ತಮವಾಗುತ್ತದೆ.
- ಅಜೀರ್ಣಕ್ಕೆ ಪ್ರತಿದಿನ ಹಸಿ ಕ್ಯಾರೆಟ್ ನ್ನು ತಿನ್ನುವುದು ಅತಿ ಉತ್ತಮವಾಗಿದೆ.
- ಊಟದ ಮುಂಚೆ ಅನಾನಸ್ ಹಣ್ಣನ್ನು ತಿನ್ನುವುದು, ಜೀರ್ಣ ಶಕ್ತಿಯನ್ನು ವೃದ್ಧಿಸಲು ಅತಿ ಸಹಾಯಕವಾಗಿದೆ.
- ಒಂದು ಲೋಟ ನೀರಿಗೆ ಲಿಂಬು ರಸವನ್ನು ಹಿಂಡಿ ಮತ್ತೆ ಸ್ವಲ್ಪ ಅಡುಗೆ ಸೋಡವನ್ನು ಬೆರೆಸಿ ಕುಡಿಯುವುದು ಅಜೀರ್ಣಕ್ಕೆ ಉತ್ತಮವಾಗಿದೆ.
- ಉತ್ತಮ ಜೀರ್ಣಕ್ರಿಯೆಗೆ ಊಟದ ನಂತರ ಕರಬೂಜ ಹಣ್ಣನ್ನು ತಿನ್ನುವುದು ಉತ್ತಮವಾಗಿದೆ.
- ಕರಿ ಜೀರಿಗೆ, ಜೀರಿಗೆ, ಒಣ ಶುಂಠಿ, ಓಂಕಾಳು, ಕರಿ ಮೆಣಸು, ಇಂಗು ಹಾಗೂ ಸೈಂದವ ಲವಣ ಇವುಗಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ನಿತ್ಯ ಊಟ ಮಾಡುವಾಗ ಒಂದು ತುತ್ತು ಅನ್ನಕ್ಕೆ ಈ ಪುಡಿ ಹಾಗೂ ತುಪ್ಪವನ್ನು ಕಲಸಿ ತಿನ್ನಬೇಕು. ಇದು ಅಜೀರ್ಣತೆಯನ್ನು ನಿವಾರಣೆ ಮಾಡಿ, ಹೊಟ್ಟೆಯ ಉತ್ತಮ ಅರೋಗ್ಯವನ್ನು ಕಾಪಾಡುತ್ತದೆ.
- ಊಟವಾದ ನಂತರ ಕಡಿದ ನಂತರದ ಮಜ್ಜಿಗೆಯನ್ನು ಕುಡಿಯುವುದು ಜೀರ್ಣಕ್ರಿಯೆಗೆ ಉತ್ತಮ ವತ್ತನ್ನು ನೀಡುತ್ತದೆ.
ಹಿಂದಿನ ಕಾಲದಲ್ಲಿ ಊಟದ ನಂತರ ತಿಂದಿದನ್ನು ಜೀರ್ಣವಾಗಿಸಲು ಎಲೆ ಅಡಿಕೆ ಬೆರೆಸಿ ತಿನ್ನುವ ಅಭ್ಯಾಸವಿತ್ತು. ಎಲೆ ಅಡಿಕೆ ತಿಂದರೆ ಊಟ ಸಂಪೂರ್ಣ ಎಂಬಂತೆ. ಅದಕ್ಕೆ ಏನೋ ಹಿಂದೆ ಅಜೀರ್ಣ, ವಾಂತಿ ಹಾಗು ಅತಿಸಾರ ದಂತಹ ಸಮಸ್ಯೆಗಳು ಕಡಿಮೆ ಕಾಣಸಿಗುತ್ತಿದ್ದವು. ಇಂದಿಗೂ ನಾವು ಅಂತಹದೇ ಕ್ರಮಗಳನ್ನು ರೂಢಿಯಲ್ಲಿ ಇಟ್ಟರೆ, ಉತ್ತಮ ಹಸಿರು,ನಾರಿನ ಯುಕ್ತ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸಿದರೆ ಅಜೀರ್ಣ ಎಂಬ ಸಮಸ್ಯೆ ನಮ್ಮ ಸನಿಹಕ್ಕೂ ಸಹ ಬರುವುದಿಲ್ಲ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Really helpfull in daily lifestyle of health habits