ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ!

Spread the love

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ!
ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ!

ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ ದಿನ ನಿತ್ಯದ ಹಲವು ಸಮಸ್ಯೆಗಳಿಗೆ ಉಪಯುಕ್ತವಾಗಿರುವ ಹಲವು ಪದಾರ್ಥಗಳ ಬಗೆಗಿನ ಮಾಹಿತಿಗಳು ಹಾಗೂ ಅದರಿಂದ ಸಿಗುವ ಆರೋಗ್ಯಕರ ಉಪಯೋಗಗಳ ಬೆಗ್ಗೆ ನಾವು ಇಂದು ತಿಳಿಯೋಣ. ಕೂದಲಿನ ರಕ್ಷಣೆಯ ಬಗ್ಗೆ ಅನೇಕ ಮಾಹಿತಿಗಳನ್ನು ನಾವು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಕರಿಬೇವು

ಕರಿಬೇವಿನ ಸೊಪ್ಪು ಪ್ರೋಟೀನ್ ಅಂಶ ಮತ್ತು ಬೀಟಾ – ಕೆರೋಟಿನ್ ಅಂಶದ ಕಣಜ. ಈ ಕಾರಣದಿಂದ ಕೂದಲು ಉದುರುವಿಕೆಯನ್ನು ತೆಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಕೂದಲಿನ ಕಪ್ಪಾಗಿ ಸೊಂಪಾಗಿ ಇರುವಂತೆ ಮಾಡುತ್ತದೆ. ನಿತ್ಯ ಕರಿಬೇವಿನ ಎಣ್ಣೆಯನ್ನು ತಲೆ ಹಚ್ಚಿ ಮಸಾಜು ಮಾಡುವುದರಿಂದ ಹೊಟ್ಟು ಸಮಸ್ಯೆ ಕೂಡ ಕಡಿಮೆ ಆಗುತ್ತದೆ. 

ಎಣ್ಣೆಯನ್ನು ತಯಾರಿಸುವ ವಿಧಾನ – ಮೊದಲು ಶುದ್ಧ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಬೇಕು, ಹಾಗೆಯೇ ಬಲಿತ ಕರಿಬೇವಿನ ಎಲೆಗಳನ್ನು ಶುದ್ಧವಾಗಿಸಿ ಇಟ್ಟುಕೊಳ್ಳಬೇಕು. ತೆಂಗಿನ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ ನಂತರ ತೆಂಗಿನ ಎಣ್ಣೆಯಲ್ಲಿ ಕರಿಬೇವನ್ನು ಹಾಕಿ ಕುದಿಸಬೇಕು. ನಂತರ ಆರಿಸಿ ಶೋಧಿಸಿ ಒಂದು ಬಾಟಲಿಯಲ್ಲಿ ಹಾಕಿಟ್ಟರೆ ಕರಿಬೇವಿನ ಎಣ್ಣೆ ಬಳಸಲು ಸಿದ್ಧವಾಗುತ್ತದೆ. ಎಷ್ಟು ಸುಲಭ ಅಲ್ವಾ, ಕರಿಬೇವು ಎಣ್ಣೆ ತಲೆ ಕೂದಲು ಸಮಸ್ಯೆಗಳಿಗೆ ರಾಮಬಾಣ ಎಂದರೆ ತಪ್ಪಾಗಲಾರದು. 

ಕರಿಬೇವು ಎಲೆಯನ್ನು ತಿನ್ನುವುದರಿಂದ ಅನೇಕ ಸಮಸ್ಯೆಗಳನ್ನು ಬಗೆ ಹರಿಸಿ ಕೊಳ್ಳಬಹುದು. ಆರೋಗ್ಯ ವರ್ಧಕ ವಾಗಿರುವ ಕರಿಬೇವನ್ನು ನಿತ್ಯ ಬಳಸುವುದನ್ನು ಪ್ರಾರಂಭಿಸೋಣ ಹಾಗು ಆರೋಗ್ಯಯುತ ಸಮಾಜವನ್ನು ಬೆಳೆಸೋಣ.

ಮೆಂತ್ಯೆ

ಮೆಂತ್ಯೆ ಸೊಪ್ಪು ಅಥವಾ ಕಾಳು ಎರಡು ಕೂಡ ದೇಹಕ್ಕೆ ತುಂಬಾ ತಂಪು. ಕಣ್ಣಿನ ಆರೋಗ್ಯಕ್ಕೂ ಮೆಂತ್ಯೆ ಯನ್ನು ಬಳಸಿದರೆ ಭಾರಿ ಉತ್ತಮ. ಕೂದಲಿನ ಸಮಸ್ಯೆಗೂ ಕೂಡ ಮೆಂತ್ಯೆ ಒಂದು ಒಳ್ಳೆಯ ಮದ್ದು ಎಂದರೆ ತಪ್ಪಾಗಲಾರದು. ಕೂದಲು ಉದುರುವಿಕೆ, ಹೊಟ್ಟಿಗೆ ಮೆಂತ್ಯೆ ಒಳ್ಳೆಯ ಪರಿಹಾರ.

ಮೆಂತ್ಯೆ ಕಾಳನ್ನು ಒಂದು ಹಿಡಿಯಷ್ಟು ರಾತ್ರಿಯೇ ನೆನೆಸಿ ಮರು ದಿನ ಬೆಳಿಗ್ಗೆ ಸ್ವಲ್ಪ ನೀರು ಚುಮುಕಿಸಿ ನುಣ್ಣನೆ ರುಬ್ಬಿ. ನಂತರ ರುಬ್ಬಿದ ಮಿಶ್ರಣವನ್ನು ತಲೆ ಕೂದಲಿನ ಬೇರಿನ ಭಾಗಕ್ಕೆ ಚೆನ್ನಾಗಿ ಹಚ್ಚಿ ಒಣಗಿದ ನಂತರ ಸ್ನಾನ ಮಾಡುವುದರಿಂದ ಹೊಟ್ಟು ದೂರವಾಗಿ ಕೂದಲು ಉದುರುವುದು ಕಡಿಮೆ ಆಗುತ್ತದೆ. ಇದು ದೇಹಕ್ಕೆ ತುಂಬಾ ತಂಪು ಆದ್ದರಿಂದ ನಿತ್ಯ ತಲೆಗೆ ಮಿಶ್ರಣ ಹಚ್ಚಿದರೆ ನೆಗಡಿ ಆಗುವ ಸಾಧ್ಯತೆಗಳಿದ್ದು, ವಾರದಲ್ಲಿ ಎರಡು ಅಥವಾ ಮೂರು ಭಾರಿ ಮಿಶ್ರಣ ಹಚ್ಚಿ ಒಣಗಿದ ನಂತರ ಸ್ನಾನ ಮಾಡಿದರೆ ಎಲ್ಲ ಕೂದಲಿನ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ಈರುಳ್ಳಿ/ ಉಳ್ಳಾಗಡ್ಡಿ

ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಮುಖ್ಯ ಪಾತ್ರ ವಹಿಸುವ ಒಂದು ತರಕಾರಿ. ಈರುಳ್ಳಿ ಇಂದ ಕೂಡ ನಾವು ನಮ್ಮ ಕೇಶದ ಆರೋಗ್ಯ ಕಾಪಾಡಿಕೊಳ್ಳಬಹುದು. ಈರುಳ್ಳಿಯಲ್ಲಿ ಸಲ್ಫರ್ ಅಂಶ ಜಾಸ್ತಿ ಇದ್ದು, ಇದು ಕೂದಲನ್ನು ದೃಢಗೊಳಿಸಿ ಉದುರುವಿಕೆಯನ್ನು ಕಡಿಮೆಯಾಗುತ್ತದೆ. ಅನೇಕ ಆಂಟಿ ಆಕ್ಸಿಡೆಂಟ್ ಗಳ ಪರಿಣಾಮವಾಗಿ ಕೂಡ ತಲೆ ಭಾಗದ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಈರುಳ್ಳಿಯ ಮತ್ತೊಂದು ಪ್ರಯೋಜನ ಏನೆಂದರೆ ತುದಿಯಲ್ಲಿ ಕವಲು ಒಡೆಯುವ ಕೂದಲನ್ನು ತಡೆಗಟ್ಟುತ್ತದೆ ಹಾಗೂ ಕೂದಲು ಉದ್ದ ಬೆಳೆಯಲು ಸಹಾಯ ಮಾಡುತ್ತದೆ.

ಈಗ ನಾವು ಈರುಳ್ಳಿಯನ್ನು ಕೂದಲಿಗೆ ಹಚ್ಚುವ ಬಗೆಯ ಬಗ್ಗೆ ತಿಳಿಯೋಣ. ಮೊದಲಿಗೆ ಒಂದು ಈರುಳ್ಳಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ನಾಲ್ಕು ಭಾಗವಾಗಿ ಕಟ್ಟರಿಸಕೊಳ್ಳಬೇಕು. ನಂತರ ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಬೇಕು. ರುಬ್ಬಿದ ಮಿಶ್ರಣವನ್ನು ತಲೆಗೆ ಚೆನ್ನಾಗಿ ಹಚ್ಚಿಕೊಳ್ಳಬೇಕು ಹಾಗೂ ಕೂದಲಿನ ತುದಿಯವರೆಗೂ ಹಚ್ಚಬೇಕು. ಒಣಗಿದ ನಂತರ ಚೆನ್ನಾಗಿ ತೊಳೆದು ಸ್ನಾನ ಮಾಡಬೇಕು. ಹೀಗೆ ವಾರದಲ್ಲಿ ಎರಡು ಮೂರು ಸಲ ಮಾಡುವುದರಿಂದ ಕೂದಲು ಕವಲು ಒಡೆಯದೆ ಸ್ವಲ್ಪ ಹೊಳ ಪಾಗಿ, ನಯವಾಗಿ ಉದ್ದ ಬೆಳೆಯುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ ಎಂದಾಕ್ಷಣ ಒಮ್ಮೆ ಬಾಯಿ ಚಪ್ಪರಿಸುವುದು ಸಹಜ.ನೆಲ್ಲಿಕಾಯಲ್ಲಿ ಅನೇಕ ವಿಧಗಳಿದ್ದು ಎಲ್ಲವೂ ಆರೋಗ್ಯ ವರ್ಧಕವಾಗಿ ನಮ್ಮ ದಿನನಿತ್ಯದ ಬಳಕೆಯಲ್ಲಿ ಜೊತೆಯಾಗಿದೆ. ವಿಟಮಿನ್ ಸಿ ಅಂಶವು ಹೇರಳವಾಗಿರುವ ಕಾರಣ ಕೊಲಾಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಇದು ಕೂದಲು ದೃದ್ಧಗೊಳಿಸಿ ಉತ್ತಮ ಬೆಳವಣಿಗೆಯಲ್ಲಿ ಸಹಾಯಕವಾಗುವ ಪ್ರೋಟೀನ್ ಇದಾಗಿದೆ.

ನೆಲ್ಲಿಕಾಯಿ ಸೇವನೆಯಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ನೆತ್ತಿನಲ್ಲಿ ರಕ್ತದ ಚಲನೆಯನ್ನು ಹೆಚ್ಚಿಸಿ ಕೂದಲಿನ ಮೂಲಕ್ಕೆ ಪೋಷಕಾಂಶ ಸಿಗುವಂತೆ ಮಾಡುತ್ತದೆ.

ಇಳಿ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ನೆಲ್ಲಿಕಾಯಿಯನ್ನು  ಬಳಸುವುದರಿಂದ ಕೂದಲು ಅಷ್ಟು ಬೇಗನೆ ಬಣ್ಣ ಕಳೆದುಕೊಳ್ಳುವುದಿಲ್ಲ.

ಕೂದಲಿನ ಬುಡವನ್ನು ಬಲಿಷ್ಠಗೊಳಿಸಿ, ಕೂದಲು ಒಡೆಯುವಿಕೆ ಮತ್ತು ಕೂದಲು ತುದಿಯಲ್ಲಿ ವಿಭಜನೆಯಾಗುವುದನ್ನು ಕಡಿಮೆ ಮಾಡುತ್ತದೆ. 

ನೆಲ್ಲಿಕಾಯಿಯಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲನ್ನು ದೃಢವಾಗಿಸುತ್ತದೆ. ಆರೋಗ್ಯಯುತ ಕೂದಲಿನ ಬೆಳವಣಿಗೆಗೆ ಉತ್ತಮವಾಗಿದೆ.

ನೆಲ್ಲಿಕಾಯಿಂದ ಒಂದು ಎಣ್ಣೆಯನ್ನು ತಯಾರಿಸಿ ವಾರಕ್ಕೆ ಎರಡು ಬಾರಿ ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆ ಕೂದಲಿಗೆ ಅನೇಕ ಪೌಷ್ಟಿಕಾಂಶ ಸಿಕ್ಕಿ ಬೆಳವಣಿಗೆ ಉತ್ತಮವಾಗುತ್ತದೆ. 

ನೆಲ್ಲಿಕಾಯಿ ಎಣ್ಣೆಯನ್ನು ಮಾಡುವ ವಿಧಾನ – ಮೊದಲಿಗೆ ಮೂರು ನೆಲ್ಲಿಕಾಯಿಯನ್ನು ಶುದ್ಧವಾಗಿ ತೊಳೆದು ಸಣ್ಣ ಚೂರುಗಳಾಗಿ ಮಾಡಬೇಕು. ನಂತರ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಲು ಇಡಬೇಕು. ಸ್ವಲ್ಪ ಬಿಸಿಯಾದ ನಂತರ ನೆಲ್ಲಿಕಾಯಿ ಚೂರನ್ನು ಹಾಕಿ 5 ರಿಂದ 6 ನಿಮಿಷಗಳು ಕುದಿಸಬೇಕು. ನೆಲ್ಲಿಕಾಯಿ ಬೆಂದಿದೆ ಎಂದು ಮನವರಿಕೆ ಆದಾಗ ಕುದಿಸುವುದನ್ನು ನಿಲ್ಲಿಸಿ ಆರಲು ಬಿಡಬೇಕು. ಆರಿದ ನಂತರ ಒಂದು ಬಾಟಲಿಗೆ ಶೋಧಿಸಿ ಹಾಕಬೇಕು. ಈಗ ನೆಲ್ಲಿಕಾಯಿ ಎಣ್ಣೆ ಬಳಸಲು ಸಿದ್ಧವಾಗಿದೆ. ವಾರಕ್ಕೆ ಎರಡು ಬಾರಿ ತಲೆ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿದರೆ ಸಾಕು ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಭೃಂಗರಾಜ

ಅನೇಕ ಶಾಂಪೂಗಳಲ್ಲಿ ಬಳಸುವ ಈ ಭೃಂಗರಾಜ ವನ್ನು ಕೇಶರಾಜ ಎಂದೂ ಕರೆಯುತ್ತಾರೆ. ತನ್ನ ವಿಶಿಷ್ಟ ಗುಣಗಳಿಂದ ಕೇಶ ಕಾಂತಿಗೆ ಅಗ್ರೆಗಣ್ಯವಾಗಿರುವ ಈ ಭೃಂಗರಾಜ ವನ್ನು ಗರಗದ ಸೊಪ್ಪು ಎಂದು ಕನ್ನಡ ದಲ್ಲಿ ಕರೆಯುತ್ತಾರೆ.

ಕೂದಲಿನ ಅಷ್ಟು ಸಮಸ್ಯೆಗೆ ಪರಿಹಾರ ನೀಡುವ ಈ ಗರಗ ಸೊಪ್ಪಿನ ಒಂದು ಮನೆಮದ್ದನ್ನು ಈಗ ತಿಳಿಯುವುದಾದರೆ,

ಮೊದಲಿಗೆ ಗರಗದ ಸೊಪ್ಪು ಯಾನೆ ಭೃಂಗರಾಜ ಚೆನ್ನಾಗಿ ಒಣಗಿಸಿ ಪುಡಿ ತಯಾರಿಸಬೇಕು. ಈ ಪುಡಿಯನ್ನು ಆಮ್ಲದ ಪುಡಿಯೊಂದಿಗೆ ಬೆರೆಸಿ ಮಿಶ್ರಣ ತಯಾರಿಸಬೇಕು. ಈ ಮಿಶ್ರಣವನ್ನು ತಲೆ ಬೇರಿನಿಂದ ಚೆನ್ನಾಗಿ ಹಚ್ಚುತ್ತಾ ತುದಿಯವರೆಗೂ ಹಚ್ಚಬೇಕು. ಆಮೇಲೆ ಚೆನ್ನಾಗಿ ಒಣಗಿದ ನಂತರ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಇದರಿಂದ ಸರ್ವ ಕೇಶ ಸಮಸ್ಯೆ ಪರಿಹಾರವಾಗುತ್ತದೆ.

ಮೇಲೆ ಹೇಳಿದ ಎಲ್ಲಾ ವಸ್ತುಗಳು ಕೂದಲಿನ ಆರೋಗ್ಯಕ್ಕೆ ಬಹು ಉತ್ತಮವಾಗಿದ್ದು, ಎಲ್ಲಾ ವಸ್ತುಗಳನ್ನು ಬಳಸಿ ನಮ್ಮ ಕೂದಲಿನ ಅರೋಗ್ಯವನ್ನು ಕಾಪಾಡಿಕೊಳ್ಳೋಣ ಎಂಬುದು ನಮ್ಮ ಆಶಯ.

ಕೂದಲಿನ ಆರೋಗ್ಯದ ಬಗೆಗಿನ ಹಿಂದಿನ ಲೇಖನಗಳನ್ನು ಒಮ್ಮೆ ಓದಿರಿ ->

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top