
ಬೇಸಿಗೆ ಎಂದಾಕ್ಷಣ ದೇಹವು ಜಾಸ್ತಿ ನೀರಿನ ಮೊರೆಹೋಗುತ್ತದೆ. ಬಿಸಿಲಿನ ಶಾಖಕ್ಕೆ ಬಾಯಾರಿಕೆ ಸರ್ವೇ ಸಾಮಾನ್ಯ. ಎಷ್ಟೇ ನೀರು ಕುಡಿದರು ಇನ್ನೂ ಬೇಕೆನಿಸುವ ಹಂಬಲ. ಈ ಸಮಯದಲ್ಲಿ ನೀರಿನ ಜೊತೆಗೆ ಕೆಲವು ಹಣ್ಣುಗಳ ಸೇವನೆ ಉತ್ತಮವಾಗಿರುತ್ತದೆ. ಹಣ್ಣುಗಳು ನೀರಿನ ಪೂರೈಕೆ ಜೊತೆಗೆ ಬೇಕಾದ ಪೋಷ್ಠಿಕಾಂಶಗಳನ್ನು ಪೂರೈಸುತ್ತದೆ. ಇಂತಹ ಹಣ್ಣುಗಳಲ್ಲಿ ಮೊದಲನೆಯದು ಕಲ್ಲಂಗಡಿ.
ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾದ ನೀರಿನ ಅಂಶವಿದ್ದು, ಬೇಗೆಯ ಆಯಾಸವನ್ನು ತ್ವರಿತವಾಗಿ ಕಡಿಮೆ ಮಾಡಿಸುತ್ತದೆ. ಮೊದಲೆಲ್ಲ ಹಸಿರು ಬಣ್ಣದ ಕಲ್ಲಂಗಡಿ ಮಾತ್ರ ನೋಡಲು ಸಿಗುತ್ತಿತ್ತು. ಈಗ ಹಳದಿ ಬಣ್ಣದ ಕಲ್ಲಂಗಡಿಗಳು ಮಾರುಕಟ್ಟೆಗೆ ಬಂದಿವೆ. ಏನೇ ಆದರೂ ಸಿಹಿ ಒಂದೇ.
ವೈಜ್ಞಾನಿಕ ವಿಚಾರಗಳು-
ಕುಟುಂಬ: ಕುಕುರ್ಬಿಟೇಸಿ (Cucurbitaceae)
ಜಾತಿ: ಸಿಟ್ರುಲಸ್(Citrullus)
ಪ್ರಭೇದ: ಲನಾಟಸ್ (Lanatus)
ವೈಜ್ಞಾನಿಕ ಹೆಸರು: ಸಿಟ್ರುಲಸ್ ಲನಾಟಸ್ (Citrullus lanatus)
ಕಲ್ಲಂಗಡಿಯಲ್ಲಿ ವಿಟಮಿನ್ ಎ, ಸಿ, ಬಿ1, ಬಿ2, ಸಸಾರಜನಕ, ಕೊಬ್ಬು, ಖಾನಿಜಾಂಶ, ಸುಣ್ಣ, ರಂಜಕ, ಕಬ್ಬಿಣ, ಥಯಾಮಿನ್, ನಿಯಾಸಿನ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಅಗತ್ಯ ಪೋಷಕಾಂಶಗಳಿದ್ದು, ಲೈಕೋಪೀನ್ ಸಹ ಒಳಗೊಂಡಿದೆ. ಕಲ್ಲಂಗಡಿ ಹಣ್ಣಿನಲ್ಲಿ 90 ಪ್ರತಿಶತ ನೀರಿನಾಂಶ ಇದೆ.
ಕಲ್ಲಂಗಡಿ ಹಣ್ಣಿನ ಉಪಯೋಗಗಳು
- ತೂಕ ಇಳಿಸಲು ಮತ್ತು ಬೊಜ್ಜು ಕರಗಿಸಲು
ಕಲ್ಲಂಗಡಿ ಹಣ್ಣು ತಿಂದರು ಸರಿ ಅಥವಾ ಹಣ್ಣಿನ ರಸ ತೆಗೆದು ದಿನಾಲೂ ಒಂದು ಲೋಟ ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ತೂಕ ಇಳಿಸಲು ಸಹಾಯಕವಾಗಿದೆ. - ವಾಂತಿಗೆ
ಅಧಿಕ ವಾಂತಿಯಾಗುತ್ತಿದ್ದರೆ, ಕಲ್ಲಂಗಡಿ ಹಣ್ಣಿನ ರಸಕ್ಕೆ ಸ್ವಲ್ಪ ಲಿಂಬು ಹಣ್ಣಿನ ರಸ ಸೇರಿಸಿ ಕುಡಿಯಬೇಕು. ವಾಂತಿಯಿಂದ ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತದೆ. ಹಾಗಾಗಿ ಕಲ್ಲಂಗಡಿ ಉಪಯೋಗಿಸುವುದು ಸೂಕ್ತ. - ಮಲಬದ್ಧತೆ
ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಮಲಭದ್ಧತೆ ಕಡಿಮೆಯಾಗಿ, ಮಲ ವಿಸರ್ಜನೆ ಸುಲಭವಾಗಿ ಆಗುತ್ತದೆ. - ಅರಿಶಿಣ ಕಾಮಾಲೆ
ಅರಿಶಿಣ ಕಾಮಾಲೆ ಸಮಯದಲ್ಲಿ ಒಂದು ಲೋಟ ಕಲ್ಲಂಗಡಿ ರಸವನ್ನು ಹಾಗೂ ಒಂದು ಲೋಟ ಮಜ್ಜಿಗೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕುಡಿಯಬೇಕು. - ಹೃದಯದ ಅರೋಗ್ಯ
ಕಲ್ಲಂಗಡಿ ಬೀಜವನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು. ಒಂದು 10 ಬಾದಾಮಿ, 1 ಚಮಚ ಗಸಗಸೆ,ಎರಡು ಚಮಚ ಕಲ್ಲಂಗಡಿ ಬೀಜವನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ½ ಚಮಚ ಕಲ್ಲುಸಕ್ಕರೆಯೊಂದಿಗೆ ರಾತ್ರಿ ಮಲಗುವ ಮುನ್ನ ಸ್ವೀಕರಿಸಬೇಕು. ಇದರಿಂದ ಹೃದಯದ ಅರೋಗ್ಯ ಉತ್ತಮವಾಗಿರುತ್ತದೆ, ನಿದ್ರಾಹೀನತೆಗೂ ಇದು ಪರಿಹಾರ ನೀಡುತ್ತದೆ. - ಮೂತ್ರ ಸಂಬಂಧಿ ಸಮಸ್ಯೆಗಳು
– ಉರಿಮೂತ್ರ ಅಥವಾ ಮೂತ್ರ ವಿಸರ್ಜನೆಯಗುವಾಗ ಉರಿ ಕಂಡು ಬಂದರೆ ಮಜ್ಜಿಗೆ ಜೊತೆ ಕಲ್ಲಂಗಡಿ ರಸವನ್ನು ಸಮಾನವಾಗಿ ಬೆರೆಸಿ, ಚಿಟಿಕೆ ಉಪ್ಪನ್ನು ಸಹ ಬೆರೆಸಿ ಕುಡಿಯಬೇಕು.
– ಮೂತ್ರವನ್ನು ಬಹು ಸಮಯ ತಡೆದಿಟ್ಟುಕೊಳ್ಳುವುದರಿಂದ ನಂತರ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಆ ಸಮಯದಲ್ಲಿ ಕಲ್ಲಂಗಡಿ ರಸಕ್ಕೆ 1/2 ಚಮಚ ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯಬೇಕು. - ಸಕ್ಕರೆ ಖಾಯಿಲೆ ಅಥವಾ ಮಧುಮೇಹ
ಕಲ್ಲಂಗಡಿ ಬೀಜವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಆ ಪುಡಿಯನ್ನು ಸೇವಿಸಿ ನಂತರ ಬೆಚ್ಚಗಿನ ನೀರು ಕುಡಿಯಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಹಾಗೆಯೇ ಕಲ್ಲಂಗಡಿ ರಸವು ಬಾಯಾರಿಕೆ, ಆಯಾಸ ಹಾಗೂ ಪಿತ್ತ ಸಂಬಂಧಿ ಸಂಮಸ್ಯೆಗಳಿಗೆ ಉತ್ತಮವಾಗಿದೆ.
ಕಲ್ಲಂಗಡಿಯಲ್ಲಿರುವ ಸೌಂದರ್ಯವರ್ಧಕದ ಗುಣಗಳು….!!
ಕಲ್ಲಂಗಡಿ ಮನೆಮದ್ದುಗಳಿಗೆ ಮಾತ್ರವಲ್ಲದೆ ನಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಕೂಡ ಉತ್ತಮವಾಗಿದೆ. ಕಲ್ಲಂಗಡಿ ಹಣ್ಣಿನ ರಸದಲ್ಲಿ ಹಸಿರು ಬಟಾಣಿ ಹಾಗೂ ಕೆಂಪು ಅಕ್ಕಿಯನ್ನು ಹಾಕಿ ಒಂದು ಡಬ್ಬದಲ್ಲಿ ಗಟ್ಟಿಯಾಗಿ ಮುಚ್ಚಿಡಬೇಕು. ಒಂದು ವಾರದ ನಂತರ ಮುಚ್ಚಿದ್ದನ್ನು ತೆಗೆದು ಚೆನ್ನಾಗಿ ಒಣಗಿಸಿ ಪುಡಿಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಹಾಲಿನೊಂದಿಗೆ ಕಲಸಿ ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕು. ನಿತ್ಯ ಸತತವಾಗಿ ಮಾಡಿದರೆ ಮುಖದಲ್ಲಿನ ಕಲೆಗಳು ಕಡಿಮೆಯಾಗುತ್ತದೆ. ಮುಖದ ಕಳೆಯು ಹೆಚ್ಚುತ್ತದೆ.
ಇನ್ನೂ ಕಲ್ಲಂಗಡಿ ಇಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಹಾಗೆ ಹಣ್ಣನ್ನು ತಿಂದರೆ ಎಂಥಹ ರುಚಿ!!! ಬಳ್ಳಿಯಲ್ಲಿ ಹುಟ್ಟಿ ಬೆಳೆದು ಅತ್ಯಂತ ಸಿಹಿ ರುಚಿಯನ್ನು ಪಡೆದು, ಅನೇಕ ಸಮಸ್ಯೆಗಳಿಗೆ ಮನೆಮದ್ದಾಗಿರುವ ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲೋರಿ ಇದ್ದು ತೂಕ ಇಳಿಕೆಗೆ ಹಾಗೂ ಡಯಟ್ ಗೆ ಉತ್ತಮ ಆಹಾರವಾಗಿದೆ. ಜಾಸ್ತಿ ಆಯಾಸ ಬಳಲಿಕೆ ಕಂಡು ಬಂದರೆ ಕಲ್ಲಂಗಡಿ ಹಣ್ಣು ಉತ್ತಮವಾಗಿದೆ. ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಕೆಲವು ಸೂಕ್ಷ್ಮ ಸಮಸ್ಯೆಗಳಿಗೂ ಕಲ್ಲಂಗಡಿ ಹಣ್ಣು ಸಹಾಯಕಾರಿಯಾಗಿದೆ. ಕಲ್ಲಂಗಡಿಯಲ್ಲಿ ರಕ್ತ ಶುದ್ಧಗೊಳಿಸುವ ಗುಣವಿದ್ದು, ಅದು ಚರ್ಮದ ಕಾಂತಿಗೆ ನೆರವಾಗುತ್ತದೆ. ಹಣ್ಣು ಮಾತ್ರವಲ್ಲದೆ ಸಿಪ್ಪೆಯ ಬಿಳಿಯ ತಿರುಳನ್ನು ಕೂಡ ಅಡುಗೆಗೆ ಬಳಸಬಹುದು. ಇಷ್ಟೆಲ್ಲ ಉಪಯೋಗ ಇರುವ ಕಲ್ಲಂಗಡಿಯನ್ನು ಬೇಗನೆ ತಿಂದು, ಅದರ ಸದುಪಯೋಗಗಳನ್ನು ಪಡೆದುಕೊಳ್ಳೋಣ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: ಬೇಸಿಗೆಯ ಬೆವರಿನ ದುರ್ಗಂಧ ಮತ್ತು ಬೆವರು ಸಾಲೆ: ನಿವಾರಣೆಗಾಗಿ ಸಲಹೆಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳ