
ನಮ್ಮ ಮನೆಯಲ್ಲೇ ಇರುವ ತರಕಾರಿ, ಸೊಪ್ಪು, ಹೂವುಗಳು ಹಾಗೂ ಬೀಜಗಳ ಸೇವನೆ ನಮ್ಮ ಆರೋಗ್ಯಕ್ಕೆ ಅತಿ ಉತ್ತಮವಾಗಿರುತ್ತದೆ. ಅಂತಹ ತರಕಾರಿ ಹಾಗೂ ಸೊಪ್ಪುಗಳನ್ನು ಬಳಸಿ ಮಾಡಬಹುದಾದ ರುಚಿಕರ ಹಾಗೂ ಆರೋಗ್ಯಕರ ಶರಬತ್ತುಗಳು ಹಾಗೂ ಅದರ ಸೇವನೆಯ ಆರೋಗ್ಯಕರ ಲಾಭಗಳ ಬಗ್ಗೆ ಈ ಲೇಖನದಲ್ಲಿ ವಿಶ್ಲೇಷಿಸೋಣ.
ಕೊತ್ತಂಬರಿ ಸೊಪ್ಪಿನ ಶರಬತ್ತು
ಬೇಕಾಗುವ ಪದಾರ್ಥಗಳು
- ಕೊತ್ತಂಬರಿ ಸೊಪ್ಪು – 1 ಕಟ್ಟು
- ಕೇಸರಿ – 2 ಎಳೆಗಳು
- ಪಚ್ಚಕರ್ಪೂರ – ಚಿಟಿಕೆ
- ಜೇನುತುಪ್ಪ – 1 ಚಮಚ
ಮಾಡುವ ವಿಧಾನ
ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಶುಚಿಗೊಳಿಸಿ, ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ನಂತರ ಶೋಧಿಸಿಕೊಂಡು, ಅದಕ್ಕೆ ಜೇನುತುಪ್ಪ, ಪಚ್ಚಕರ್ಪುರ ಹಾಗೂ ಕೇಸರಿ ಎಳೆಗಳನ್ನು ಹಾಕಿ ಕಲಸಿದರೆ ಕೊತ್ತಂಬರಿ ಸೊಪ್ಪಿನ ಶರಬತ್ತು ಸಿದ್ದವಾಗುತ್ತದೆ.
ಆರೋಗ್ಯಕರ ಪ್ರಯೋಜನಗಳು
- ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ, ಬಿ, ಬಿ2, ಪ್ರೊಟೀನ್, ಮೇದಸ್ಸು, ಕಬ್ಬಿಣ, ಕ್ಯಾಲ್ಸಿಯಂ, ತೇವದ ಅಂಶಗಳು ಹೇರಳವಾಗಿದೆ.
- ತಲೆ ಸುತ್ತುವಿಕೆ ನಿವಾರಣೆಗೆ ಈ ಶರಬತ್ತು ಉತ್ತಮವಾಗಿದೆ.
- ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಾದ ಹೊಟ್ಟೆನೋವು, ಹೊಟ್ಟೆ ಉಬ್ಬರವನ್ನು ಕಡಿಮೆಗೊಳಿಸಲು ಈ ಶರಬತ್ತು ಉತ್ತಮವಾಗಿದೆ.
- ಕಣ್ಣಿನ ಆರೋಗ್ಯಕ್ಕೆ ಇದು ಅತಿ ಉತ್ತಮವಾಗಿದೆ.
- ಉಷ್ಣದಿಂದ ಆಗುವ ಅಥವಾ ಅಲರ್ಜಿ ಸಮಸ್ಯೆಯಿಂದ ಉಂಟಾಗುವ ಬಾಯಿ ಹುಣ್ಣು, ಗಂಟಲಿನ ಹುಣ್ಣುಗಳ ನಿವಾರಣೆಗೆ ಈ ಶರಬತ್ತು ಉತ್ತಮವಾಗಿದೆ.
- ಮೂತ್ರಪಿಂಡಗಳ ಆರೋಗ್ಯ ಹಾಗೂ ಕಟ್ಟು ಮೂತ್ರ ನಿವಾರಣೆಗೆ ಉತ್ತಮ ಪಾನೀಯ ಇದಾಗಿದೆ.
- ನಿದ್ರಾಹೀನತೆಯ ಸಮಸ್ಯೆಯು ಕೂಡ ಕೊತ್ತಂಬರಿ ಸೊಪ್ಪಿನ ಶರಬತ್ತು ಕುಡಿಯುವುದರಿಂದ ಕಡಿಮೆಯಾಗುತ್ತದೆ.
ಗರಿಕೆ ಶರಬತ್ತು
ಬೇಕಾಗುವ ಪದಾರ್ಥಗಳು
- ಗರಿಕೆ ಹುಲ್ಲು – 1 ಕಟ್ಟು
- ನಿಂಬೆ ರಸ – 1
- ಏಲಕ್ಕಿ ಪುಡಿ – ½ ಚಮಚ
- ಜೇನುತುಪ್ಪ – 1 ಚಮಚ
ಮಾಡುವ ವಿಧಾನ
ಗರಿಕೆ ಹುಲ್ಲನ್ನು ಚೆನ್ನಾಗಿ ಶುಚಿಗೊಳಿಸಿ, ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಶೋಧಿಸಿಕೊಂಡು ಅದಕ್ಕೆ ನಿಂಬೆ ರಸವನ್ನು, ಏಲಕ್ಕಿ ಪುಡಿ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು.
ಆರೋಗ್ಯಕರ ಪ್ರಯೋಜನಗಳು
- ಗರಿಕೆಯಲ್ಲಿ ಅಗಾಧವಾಗಿ ಪ್ರೊಟೀನ್ ಹಾಗೂ ಕಾರ್ಬೋಹೈಡ್ರೈಟ್ ಅಂಶಗಳು ಇವೆ.
- ಸೋರುವ ಮೂಗಿನ ಸಮಸ್ಯೆಗೆ ಗರಿಕೆ ಶರಬತ್ತು ಉತ್ತಮವಾಗಿದೆ.
- ಹೊಟ್ಟೆಗೆ ಸಂಬಂಧಪಟ್ಟ, ಕಿಬ್ಬೊಟ್ಟೆ ನೋವುಗಳು ಕೂಡ ಕಡಿಮೆಯಾಗುತ್ತದೆ.
- ಪಿತ್ತದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಗರಿಗೆ ಹುಲ್ಲಿನ ಶರಬತ್ತು ಉತ್ತಮವಾಗಿದೆ. ತಲೆ ತಿರುಗುವುದು, ವಾಂತಿ, ಮೈ ಕೈ ತುರಿಕೆಗಳು ಇವೆಲ್ಲಕ್ಕೂ ಈ ಪಾನೀಯ ಉತ್ತಮವಾಗಿದೆ.
- ತಲೆಯಲ್ಲಿನ ಹೊಟ್ಟಿನ ಸಮಸ್ಯೆಗೂ ಈ ಪಾನೀಯ ಉತ್ತಮವಾಗಿದೆ.
- ಚರ್ಮದ ಉತ್ತಮ ಕಾಂತಿಗೂ ಇದು ಉತ್ತಮವಾಗಿದೆ.
ತುಳಸಿ - ಟೊಮೇಟೊ ಶರಬತ್ತು
ಬೇಕಾಗುವ ಪದಾರ್ಥಗಳು
- ಟೊಮೇಟೊ 1
- ತುಲಸಿ ಎಲೆಗಳು 10 ದಳಗಳು
- ಶುಂಠಿ 1 ಇಂಚು
- ಕರಿ ಮೆಣಸು 3 ಕಾಳು
- ನಿಂಬೆರಸ 2 ಚಮಚ
- ಉಪ್ಪು
ಮಾಡುವ ವಿಧಾನ
ತುಳಸಿ – ಟೊಮೇಟೊ ಶರಬತ್ತು ತಯಾರಿಸಲು ಮೊದಲು ಮಿಕ್ಸಿ ಜಾರಿಗೆ ಟೊಮೇಟೊ, ತುಳಸಿ ದಳಗಳು, ಶುಂಠಿ, ಕಾಳುಮೆಣಸು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಸೋಸಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಶೋಧಿಸಿದ ರಸಕ್ಕೆ ಲಿಂಬೆ ರಸವನ್ನು ಸೇರಿಸಿದರೆ ತುಳಸಿ – ಟೊಮೇಟೊ ಶರಬತ್ತು ಸವಿಯಲು ಸಿದ್ದವಾಗುತ್ತದೆ.
ಆರೋಗ್ಯಕರ ಪ್ರಯೋಜನಗಳು
- ಮಧುಮೇಹಿಗಳ ಆರೋಗ್ಯಕ್ಕೆ ಇದು ಅತಿ ಉತ್ತಮವಾದ ಶರಬತ್ತು ಇದಾಗಿದೆ.
- ಹಲ್ಲು ಹಾಗೂ ವಸಡುಗಳ ಆರೋಗ್ಯಕ್ಕೆ ಇದು ಒಳ್ಳೆಯ ಶರಬತ್ತು.
- ಗರ್ಭಿಣಿಯರಿಗೆ ಇದು ಉತ್ತಮ ಪಾನೀಯವಾಗಿದ್ದು, ಬೆಳೆಯುವ ಮಕ್ಕಳಿಗೂ ಇದು ಒಳ್ಳೆಯದಾಗಿದೆ.
- ಸುಸ್ತು, ಬಾಯಾರಿಕೆ ಹಾಗೂ ಬಳಲಿಕೆಗೆ ಉತ್ತಮ ಶರಬತ್ತು ಇದಾಗಿದೆ.
ಕೆಂಪು ಮೂಲಂಗಿ ಶರಬತ್ತು
ಬೇಕಾಗುವ ಪದಾರ್ಥಗಳು
- ಕೆಂಪು ಮೂಲಂಗಿ ಹೋಳುಗಳು 1 ಕಪ್
- ಕೆಂಪು ಕಲ್ಲುಸಕ್ಕರೆ ಪುಡಿ 2 ಚಮಚ
- ಪಚ್ಚಕರ್ಪೂರ ಚಿಟಿಕೆ
- ಕೇಸರಿ ಎಳೆಗಳು 3
- ಏಲಕ್ಕಿ ಪುಡಿ ½ ಚಮಚ
ಮಾಡುವ ವಿಧಾನ
ಮೊದಲಿಗೆ ಕೆಂಪು ಮೂಲಂಗಿಯನ್ನು ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಶೋಧಿಸಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಕೆಂಪು ಮೂಲಂಗಿ ರಸಕ್ಕೆ ಕೆಂಪುಕಲ್ಲುಸಕ್ಕರೆ ಪುಡಿ, ಪಚ್ಚಕರ್ಪೂರ, ಏಲಕ್ಕಿ ಪುಡಿ ಹಾಗೂ ಕೇಸರಿ ದಳಗಳನ್ನು ಸೇರಿಸಿದರೆ, ಕೆಂಪು ಮೂಲಂಗಿ ಶರಬತ್ತು ಸವಿಯಲು ಸಿದ್ದವಾಗುತ್ತದೆ.
ಆರೋಗ್ಯಕರ ಪ್ರಯೋಜನಗಳು
- ಇದು ಎಲ್ಲರೂ ಕುಡಿಯಲೇ ಬೇಕಾದ ಶರಬತ್ತು ಕಾರಣವೆನೆಂದರೆ ಕೆಂಪು ಮೂಲಂಗಿಯು ಹೃದಯದ ಆರೋಗ್ಯಕ್ಕೆ ಬಲು ಉತ್ತಮವಾಗಿದೆ. ರಕ್ತದ ಚಲನೆಯನ್ನು ಕೂಡ ಸುಲಭಗೊಳಿಸಿ ಮೂತ್ರ ಪಿಂಡದ ಅರೋಗ್ಯವನ್ನು ಕಾಪಾಡುತ್ತದೆ.
- ಈ ಶರಬತ್ತು ಹೆಣ್ಣು ಮಕ್ಕಳ ಋತುಚಕ್ರದ ಅರೋಗ್ಯವನ್ನು ಉತ್ತಮವಾಗಿರಿಸಿ, ಕ್ರಮಬದ್ಧವಾಗಿ ನಡೆಯುವಂತೆ ಮಾಡುತ್ತದೆ.
- ತಲೆನೋವು, ಕೀಲುನೋವು, ಸಂಧಿವಾತಗಳಿಗೂ ಇದು ಉತ್ತಮ ಪಾನೀಯವಾಗಿದೆ.
- ಕೆಂಪು ಮೂಲಂಗಿಯ ಶರಬತ್ತು ಆರೋಗ್ಯಕರವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಬೂದುಗುಂಬಳ ಬೀಜದ ಶರಬತ್ತು
ಬೇಕಾಗುವ ಪದಾರ್ಥಗಳು
- ಬೂದುಗುಂಬಳ ಬೀಜಗಳು ½ ಕಪ್
- ನಿಂಬೆ ರಸ 2 ಚಮಚ
- ಏಲಕ್ಕಿ ಪುಡಿ ½ ಚಮಚ
- ಜೇನುತುಪ್ಪ 1 ಚಮಚ
ಮಾಡುವ ವಿಧಾನ
ಬೂದುಗುಂಬಳಕಾಯಿಯ ಹಸಿ ಬೀಜವನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಶೋಧಿಸಿಕೊಂಡು ಅದಕ್ಕೆ ನಿಂಬೆ ರಸ ಬೆರೆಸಿ, ಜೊತೆಗೆ ಏಲಕ್ಕಿ ಪುಡಿ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿದರೆ ಬೂದುಗುಂಬಳ ಬೀಜದ ಶರಬತ್ತು ಸವಿಯಲು ಸಿದ್ದವಾಗುತ್ತದೆ.
ಆರೋಗ್ಯಕರ ಪ್ರಯೋಜನಗಳು
- ಬೂದುಗುಂಬಳದ ಬೀಜದಲ್ಲಿ ವಿಟಮಿನ್ ಎ, ಬಿ6, ಸಿ, ಇ, ಫಾಸ್ಪರಸ್, ಕ್ಯಾಲ್ಸಿಯಂ, ಆಯೋಡಿನ್, ಸೋಡಿಯಂ, ಪೊಟ್ಯಾಶಿಯಂ ಅಂಶಗಳು ಹೇರಳವಾಗಿದೆ.
- ಇದು ತೂಕ ಇಳಿಸಲು ಉತ್ತಮ ಪಾನೀಯವಾಗಿದೆ.
- ಹೃದಯದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
- ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡುತ್ತದೆ.
- ಆರೋಗ್ಯವರ್ಧಕ ಪಾನೀಯ ಇದಾಗಿದೆ. ಕ್ರಿಮಿಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ಇದು ಒದಗಿಸುತ್ತದೆ.
ನೀವಿಲ್ಲಿ ಗಮನಿಸಿರಬಹುದು ಒಂದು ಶರಬತ್ತಿನಲ್ಲೂ ಕೂಡ ಸಕ್ಕರೆಯ ಬಳಕೆಯನ್ನು ಮಾಡಿಲ್ಲ. ಕಾರಣ ಸಕ್ಕರೆಯು ದೇಹಕ್ಕೆ, ದೇಹದ ಆರೋಗ್ಯಕ್ಕೆ ಅಷ್ಟೂ ಒಳ್ಳೆಯದಲ್ಲ. ಸಕ್ಕರೆಯ ಬದಲಿಗೆ ಜೇನುತುಪ್ಪ, ಕೆಂಪು ಕಲ್ಲುಸಕ್ಕರೆಯ ಉಪಯೋಗ ಮಾಡುವುದು ಉತ್ತಮವಾಗಿದೆ. ನೀವು ಕೂಡ ಎಲ್ಲಾ ರೀತಿಯ ಶರಬತ್ತುಗಳನ್ನು ತಯಾರಿಸಿ, ಕುಡಿದು, ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಎಂಬುದು ನಮ್ಮ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.